ಮಂಗಳೂರು: ನಗರದ ಕಾವೂರು ಮಹಾಲಿಂಗೇಶ್ವರ ದೇವಸ್ಥಾನ ಆಯ್ತು, ಇದೀಗ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಜಾತ್ರೋತ್ಸವಕ್ಕೆ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿರ್ಬಂಧ ವಿಧಿಸಲಾಗಿದೆ. ದೇವಸ್ಥಾನದ ವಠಾರದಲ್ಲಿ ಹಿಂದೂ ಸಂಘಟನೆಗಳು ನಿರ್ಬಂಧದ ಬ್ಯಾನರ್ ಅಳವಡಿಸಿವೆ.
ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಉಲ್ಲೇಖಿಸಿ ವಿಹಿಂಪ ಮತ್ತು ಬಜರಂಗದಳ ಬ್ಯಾನರ್ ಅಳವಡಿಸಿದೆ. ಕದ್ರಿ ವಿಶ್ವ ಹಿಂದೂ ಪರಿಷತ್ ಘಟಕದಿಂದ ದೇವಸ್ಥಾನದ ಪ್ರವೇಶದಲ್ಲೇ ಬ್ಯಾನರ್ ಅಳವಡಿಸಲಾಗಿದ್ದು, ಜ.15ರಿಂದ ಜ.25ರ ವರೆಗೆ ಕದ್ರಿ ಜಾತ್ರೋತ್ಸವ ನಡೆಯುತ್ತಿದೆ. ಈಗಾಗಲೇ ದೇವಸ್ಥಾನದ ರಸ್ತೆಯುದ್ದಕ್ಕೂ ಸ್ಟಾಲ್ಗಳನ್ನು ಅಳವಡಿಸಲಾಗಿದೆ.ವ್ಯಾಪಾರಕ್ಕೆ ಬಂದವರನ್ನು ವಾಪಸ್ ಕಳಿಸಲಾಗಿದೆ
ಕದ್ರಿ ಶ್ರೀಮಂಜುನಾಥ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ. ಈ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದಾರೆ. ಅದರಂತೆ ಈ ಬಾರಿಯೂ ಮುಸ್ಲಿಂ ವ್ಯಾಪಾರಿಗಳು ಜಾತ್ರೆಯಲ್ಲಿ ವ್ಯಾಪಾರಕ್ಕೆ ಆಗಮಿಸಿದ್ದರು. ಆಗ ಅನ್ಯಧರ್ಮೀಯರನ್ನು ಬಜರಂಗದಳ ಕಾರ್ಯಕರ್ತರು ವಾಪಸ್ ಕಳುಹಿಸಿದ್ದಾರೆ.
ಕಳೆದ ವರ್ಷ ಅವಿಭಜಿತ ದಕ್ಷಿಣ ಕನ್ನಡ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ನಿಷೇಧದ ಬ್ಯಾನರ್ ಈ ವರ್ಷವೂ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಪ್ಪನಾಡು, ಉಡುಪಿ ಜಿಲ್ಲೆಯ ಕಾಪು, ಪೆರ್ಡೂರು ದೇವಸ್ಥಾನಗಳಲ್ಲಿ ಈ ರೀತಿಯ ಬ್ಯಾನರ್ ಗಳು ಕಾಣಿಸಿಕೊಂಡದ್ದು ವಿವಾದಕ್ಕೆ ಕಾರಣವಾಗಿತ್ತು.