ಮೂಡುಬಿದಿರೆ: ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ ದಿ. ಬಲಿಪ ನಾರಾಯಣ ಭಾಗವತ ಹಾಗೂ ಸಾಹಿತಿ ಕೀರ್ತನೆಕಾರ ಅಂಬಾತನಯ ಮುದ್ರಾಡಿಯವರಿಗೆ ಅಭಿಮಾನಿ ಬಳಗದ ವತಿಯಿಂದ ನುಡಿನಮನ ಕಾರ್ಯಕ್ರಮವು ಸಮಾಜ ಮಂದಿರದಲ್ಲಿ ಜರಗಿತು.
ಮಾಜಿ ಸಚಿವ ಅಭಯಚಂದ್ರ ಜೈನ್ ನುಡಿನಮನ ಸಲ್ಲಿಸಿ ಬಲಿಪರಿಗೆ ತನ್ನ ಸ್ವರ ಶಕ್ತಿಯಿಂದಲೇ ಪ್ರೇಕ್ಷಕರನ್ನು ಹಿಡಿದಿಡುವ ಸಾಮಥ್ಯವಿತ್ತು. ಯಕ್ಷಗಾನ ಕಲೆಯಲ್ಲಿ ಅಪಾರ ಪ್ರೌಡಿಮೆಯಿತ್ತು. ಅವರ ಬದುಕು ಯುವ ಕಲಾವಿದರಿಗೆ ಆದರ್ಶ ಮತ್ತು ಸ್ಪೂರ್ತಿ. ಅಂಬಾತನಯ ಮುದ್ರಾಡಿಯವರು ಕೀರ್ತನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಯಕ್ಷಗಾನ ಕಲಾಪೋಷಕ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿ ಬಲಿಪ ಭಾಗವತರು ಕಲಾ ಕ್ಷೇತ್ರದಲ್ಲಿ ಸಾಧಿಸಿದ ಸಿದ್ಧಿ ಸಾಧನೆ, ಕಲಾವಿದರ ಮೇಲೆ ಬೀರಿದ ಪ್ರಭಾವವನ್ನು ವಿವರಿಸಿದರು.
ಇರುವೈಲು ಮೇಳದ ಸಂಚಾಲಕ ಐಕುಮಾರ್ ಶೆಟ್ಟಿ ಯಕ್ಷದೇವ ಮಿತ್ರ ಕಲಾಮಂಡಳಿಯ ಅಧ್ಯಕ್ಷ ದೇವನಂದ ಭಟ್, ಯಕ್ಷದೇಗುಲದ ಸಂಚಾಲಕ ಮಹಾವೀರ ಪಾಂಡಿ, ಯಕ್ಷಮೇನಕದ ಸಂಚಾಲಕ ಸದಾಶಿವ ರಾವ್, ಪಟ್ಲಪೌಂಡೇಷನ್ ನ ಅಧ್ಯಕ್ಷ ಪ್ರೇಮನಾಥ ಮಾರ್ಲ, ಪತ್ರಕರ್ತ ಧನಂಜಯ ಮೂಡುಬಿದಿರೆ, ಪಡಿಯಾರ್ ಮೃತರ ಗುಣಗಾನ ನಡೆಸಿದರು. ಬಳಿಕ ಮೌನ ಪ್ರಾರ್ಥನೆ ಮೂಲಕ ಸಂತಾಪ ಸಲ್ಲಿಸಲಾಯಿತು.