ಮಂಗಳೂರು : ನಿನ್ನೆ ನಡೆದ ಘಟನೆಗೂ ಕಿಸ್ ಪಂದ್ಯ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
ಮಂಗಳೂರಿನ ಪಬ್ ಮೇಲೆ ಬಜರಂಗದಳ ದಾಳಿ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ನಗರದ ಪ್ರಸಿದ್ಧ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಪಬ್ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದು, ನಗರದಲ್ಲಿ ಯಾವುದೇ ಪಬ್ ಅಟ್ಯಾಕ್ ಆಗಿಲ್ಲ. ಬಲ್ಮಠದ ಪಬ್ ಮುಂದೆ ನಿನ್ನೆ ರಾತ್ರಿ ಹತ್ತು-ಹನ್ನೆರೆಡು ಮಂದಿ ಜಮಾಯಿಸಿದ್ದರು. ಪಬ್ ಒಳಗೆ ಅಪ್ರಾಪ್ತರು ಮದ್ಯ ಸೇವನೆ ಮಾಡುತ್ತಿದ್ದರು ಎಂಬ ಆರೋಪ ಅವರದ್ದಾಗಿತ್ತು. ಬೌನ್ಸರ್ ಪಬ್ ಮ್ಯಾನೇಜರ್ ಜೊತೆ ಮಾತನಾಡಿ ಪಬ್ ಒಳಗಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದಾನೆ ಎಂದರು.
ಅದಲ್ಲದೇ, ಇಲ್ಲಿ ಯಾವುದೇ ಅಟ್ಯಾಕ್, ದೈಹಿಕ ಹಲ್ಲೆಗಳು ನಡೆದಿಲ್ಲ. ಪಬ್ ಒಳಗೆ ಯಾರೂ ಪ್ರವೇಶ ಮಾಡಿಲ್ಲ. ನಿನ್ನೆ ನಡೆದ ಘಟನೆಗೂ ಕಿಸ್ ಪಂದ್ಯ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಆ ಪ್ರಕರಣದಲ್ಲಿ ಭಾಗಿಯಾದವರು ಯಾರೂ ನಿನ್ನೆ ಪಬ್ ಪಾರ್ಟಿಯಲ್ಲಿ ಭಾಗವಹಿಸಿಲ್ಲ. ಇನ್ನೂ ಈ ಬಗ್ಗೆ ಯಾರೂ ದೂರು ನೀಡಿಲ್ಲ, ದೂರು ನೀಡಿದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದರು.
ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರ ತಡೆ ವಿಚಾರ ಸಂಬಂಧಿಸಿ ಯು.ಟಿ.ಖಾದರ್ ಮಾತನಾಡಿ
ಮಂಗಳೂರಿನಲ್ಲಿ ಬಾರ್ ಮುಂದೆ ನಡೆದ ಘಟನೆ ಬ್ರಾಂಡ್ ಮಂಗಳೂರಿಗೆ ಹೊಡೆತ ಕೊಟ್ಟಿದೆ. ಸಮಾಜದ್ರೋಹಿ ಶಕ್ತಿಗಳು ಮತ್ತು ದಾರಿ ತಪ್ಪಿದ ಯುವಕರಿಂದ ಕೃತ್ಯ ನಡೆದಿದೆ. ಇದರಿಂದ ಬ್ರಾಂಡ್ ಮಂಗಳೂರು ಗೌರವಕ್ಕೆ ಕಪ್ಪು ಚುಕ್ಕೆ.
ಇದು ಭವಿಷ್ಯದ ಮಂಗಳೂರಿನ ಅಭಿವೃದ್ಧಿಗೆ ಮಾರಕ. ಹೀಗಾಗಿ ಇಂಥವರನ್ನ ಪತ್ತೆ ಹಚ್ಚಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.ಈ ವ್ಯಾಪಾರಸ್ಥರು ಕೋವಿಡ್ ನಿಂದ ನಷ್ಟಕ್ಕೆ ಒಳಗಾಗಿದ್ದಾರೆ. ಟ್ಯಾಕ್ಸ್, ಜಿಎಸ್ ಟಿ ಕಟ್ಟುವ ಜೊತೆ ಈ ರೌಡಿಗಳಿಗೆ ಹಫ್ತಾ ಕೊಡಬೇಕು. ಇದೊಂದು ಇವರ ಹಫ್ತಾ ವಸೂಲಿ ತಂತ್ರ ಅಷ್ಟೇ. ಸರ್ಕಾರ ಇದನ್ನ ಗಮನಿಸಲಿ, ಜನರ ನೆಮ್ಮದಿ ಹಾಳಾಗ್ತಿದೆ. ಈ ಘಟನೆಗಳಿಗೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಪ್ರೇರಣೆ. ಸಿಎಂ ಹೇಳಿದ ಆಕ್ಷನ್ ರಿಯಾಕ್ಟನ್ ಹೇಳಿಕೆ ಈ ಯುವಕರ ತಲೆಯಲ್ಲಿ ಇದೆ. ನಿನ್ನೆ ಪಬ್ ಗೆ ಹೋಗಿ ಗಲಾಟೆ ಮಾಡಿದವರು ರಿಯಾಕ್ಷನ್ ಅಂತಿದಾರೆ. ಅಲ್ಲಿದ್ದ ಮಕ್ಕಳಿಗೆ ತಂದೆ-ತಾಯಿ ಇದಾರೆ, ಅದನ್ನ ಕೇಳೋಕೆ ಇವರ್ಯಾರು?. ಖಾಸಗಿ ಜಾಗಕ್ಕೆ ಹೋಗಿ ಯಾರ್ಯಾರ ಮಕ್ಕಳಿಗೆ ನಿಂದಿಸಲು ಅವಕಾಶ ಕೊಟ್ಟದ್ಯಾರು?. ಸರ್ಕಾರ ಮತ್ತು ಪೊಲೀಸ್ ಇಲಾಖೆ ಇದನ್ನ ಸಮಗ್ರ ತನಿಖೆ ನಡೆಸಲಿ.
ಮಂಗಳೂರಿನಲ್ಲಿ ಬ್ಯುಸಿನೆಸ್ ಮಾಡುವವರಿಗೆ ನೆಮ್ಮದಿಯಾಗಿರಲು ಅವಕಾಶ ಕೊಡಿ. ಈ ಬ್ಲ್ಯಾಕ್ ಮೇಲರ್, ಹಫ್ತಾ ವಸೂಲಿಯವರ ಮೇಲೆ ಕ್ರಮ ಕೈಗೊಳ್ಳಿ. ಮಂಗಳೂರಿನ ಗೌರವ ಉಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿ. ಇನ್ಫೋಸಿಸ್ ಒಂದು ಬಿಟ್ಟು ಇಲ್ಲಿಗೆ ಯಾವುದೇ ಐಟಿ ಕಂಪೆನಿ ಬರ್ತಿಲ್ಲ. ಇದು ಮಂಗಳೂರು ಅಭಿವೃದ್ಧಿಗೆ ಮಾರಕ, ಸರ್ಕಾರ ಕ್ರಮ ತೆಗೆದುಕೊಳ್ಳಲಿ.
ಕಾಲೇಜು ವಿದ್ಯಾರ್ಥಿಗಳ ಕಿಸ್ಸಿಂಗ್ ಪ್ರಕರಣದಲ್ಲಿ ಅವರ ಮೇಲೆ ಕೇಸ್ ಆಗಿದೆ. ನಿನ್ನೆಯ ಘಟನೆ ಬಗ್ಗೆ ಸರ್ಕಾರ ಮತ್ತು ಪೊಲೀಸರ ಆಕ್ಷನ್ ಏನು? ಈ ಬಗ್ಗೆ ಸುಮ್ಮನೆ ಕೂರ್ತಾರಾ? ಇದರ ವಿಚಾರದಲ್ಲಿ ಮೌನ ಯಾಕೆ?. ಅವರು ಹಫ್ತಾ ಕೊಡದ ಕಾರಣಕ್ಕೆ ದಾಳಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಲಿ. ಸರ್ಕಾರ ಸುಮ್ಮನೆ ಕೂರುವುದಾದರೆ ಎಲ್ಲಾ ಪಬ್ ಗಳ ಲೈಸೆನ್ಸ್ ರದ್ದು ಮಾಡಲಿ. ಪಬ್ ಮತ್ತು ಡ್ಯಾನ್ಸ್ ಬಾರ್ ಎಲ್ಲವನ್ನೂ ಇವರು ಬಂದ್ ಮಾಡಲಿ. ನಮ್ಮ ಜಿಲ್ಲೆಯ ಹೆಸರು ಕೆಡಬಾರದು, ತಕ್ಷಣ ಕ್ರಮ ಆಗಲಿ. ಈ ರೀತಿ ಅನೈತಿಕ ಗೂಂಡಾಗಿರಿ ಮಾಡಿದ್ರೆ ಅದನ್ನ ಮಟ್ಟ ಹಾಕಬೇಕು. ಕಾನೂನು ಬದ್ದ ವ್ಯಾಪಾರ ಮಾಡುವವರಿಗೆ ನೆಮ್ಮದಿಯಾಗಿರಲು ಬಿಡಬೇಕು. ಅಪ್ರಾಪ್ತರು ಬಂದಿದ್ದರೆ ಅವರ ಮೇಲೆ ಅಬಕಾರಿ ಇಲಾಖೆ ಕ್ರಮ ತೆಗೆಯಲಿ ಎಂದು ಪ್ರತಿಕ್ರಿಯಿಸಿದ್ದಾರೆ.
“ಪಬ್ ಅಟ್ಯಾಕ್ ನಡೆದಿಲ್ಲ, ಅಪ್ರಾಪ್ತ ವಯಸ್ಕರಿಗೆ ಮದ್ಯ ನೀಡುವುದು ತಪ್ಪು” -ಶಾಶಕ ಭರತ್ ಶೆಟ್ಟಿ
“ಬಲ್ಮಠದ ಪಬ್ ಗೆ ಯಾವುದೇ ರೀತಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿಲ್ಲ. ಪಬ್ ಮ್ಯಾನೇಜರ್ ಮತ್ತು ಬೌನ್ಸರ್ ಜೊತೆ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ನೀಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ ಅಷ್ಟೇ.
ಈ ಬಗ್ಗೆ ಕಮಿಷನರ್ ಜೊತೆ ಚರ್ಚಿಸಿದ್ದೇನೆ. ಘಟನೆಯ ಬಗ್ಗೆ ಪಬ್ ಸಿಬ್ಬಂದಿ ವಿಚಾರಣೆ ನಡೆಯುತ್ತಿದ್ದು ಸತ್ಯಸಂಗತಿ ಹೊರಬರಲಿದೆ. ಪಬ್ ಅಥವಾ ಬಾರ್ ನಲ್ಲಿ ಅಪ್ರಾಪ್ತರಿಗೆ ಮದ್ಯ, ಸಿಗರೇಟು ಮತ್ತಿತರ ಅಮಲು ಪದಾರ್ಥ ನೀಡುವುದು ಕಾನೂನು ಪ್ರಕಾರ ಅಪರಾಧ.
ಬಾರ್, ಪಬ್ ಗಳು ಅದನ್ನು ಉಲ್ಲಂಘಿಸಿದಲ್ಲಿ ಇಂತಹ ಘಟನೆಗಳು ಜರುಗುತ್ತವೆ. ಹೀಗಾಗದಂತೆ ನಾಗರಿಕ ಸಮಾಜ ಜಾಗ್ರತೆ ವಹಿಸಬೇಕು” ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.