ಮಂಗಳೂರು: ಕೆ ಎಸ್ ಹೆಗ್ಡೆ ಆಸ್ಪತ್ರೆಯ ನಿರ್ಲಕ್ಷ್ಯ, ತಪ್ಪಾದ ಚಿಕಿತ್ಸೆಯಿಂದ ಎಡಗಾಲು ಕಳೆದು ಕೊಂಡಿರುವ ಕುರ್ನಾಡು ಗ್ರಾಮದ ಯುವಕ ನೌಷಾದ್ ಗೆ ನ್ಯಾಯಯುತ ಪರಿಹಾರ ಒದಗಿಸಲು, ತಪ್ಪಿತಸ್ಥ ಆಸ್ಪತ್ರೆಯ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮಾರ್ಚ್ 14 ರಂದು ದೇರಳಕಟ್ಟೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರಗೆ ಒಂದು ದಿನದ ಸಾಮೂಹಿಕ ಧರಣಿ ನಡೆಸಲಾಗುವುದು ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತಿಳಿಸಿದೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಕುರ್ನಾಡು ನೌಷಾದ್ ತಲಪಾಡಿ ಸಮೀಪ ನಡೆದ ಸಣ್ಣ ರಸ್ತೆ ಅಪಘಾತದಲ್ಲಿ ಕಾಲು ನೋವಿಗೆ ಒಳಗಾಗಿದ್ದರು. ಕಾಲು ನೋವಿಗೆ ಚಿಕಿತ್ಸೆ ಗಾಗಿ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದರು.
ಮೊಣಕಾಲಿನ ಬಳಿ ರಕ್ತನಾಳಕ್ಕೆ ಪೆಟ್ಟು ಬಿದ್ದಿರುವುದು ಪರೀಕ್ಷೆಗಳಲ್ಲಿ ಪತ್ತೆಯಾಗಿದ್ದರೂ ಆ ಕುರಿತು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ನೌಷಾದ್ ಎಡಗಾಲು ಕಳೆದುಕೊಂಡು ಶಾಶ್ವತ ಅಂಗವಿಕಲರಾಗುವಂತಾಗಿದೆ.
ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯ, ತಪ್ಪಾದ ಚಿಕಿತ್ಸೆ ಆಘಾತಕಾರಿಯಾಗಿದ್ದು, ಮೆಡಿಕಲ್ ಕಾಲೇಜು ಹೊಂದಿರುವ ಆಸ್ಪತ್ರೆಯ ಈ ರೀತಿಯ ಬೇಜವಾಬ್ದಾರಿತನ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಿನ್ನಲೆಯಲ್ಲಿ ಸಂತ್ರಸ್ತ ನೌಷಾದ್ ಗೆ ಆಡಳಿತ ಮಂಡಳಿ ಸೂಕ್ತ ಪರಿಹಾರ ಒದಗಿಸಬೇಕು, ತಪ್ಪಿತಸ್ಥ ಆಸ್ಪತ್ರೆಯ ವಿರುದ್ದ ಸರಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಡಿವೈಎಫ್ಐ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ಸಮಿತಿಯ ಪ್ರಕಟನೆ ತಿಳಿಸಿದೆ.