ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಮಂಗಳೂರು ನಗರ ಘಟಕದ ಪದಗ್ರಹಣ ಕಾರ್ಯಕ್ರಮ ಮತ್ತು ಚತುರ್ಥ ವಾರ್ಷಿಕ ಸಂಭ್ರಮ ಅ.೩೧ ರಂದು ಅಪರಾಹ್ನ ೩ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ನಗರದ ಪುರಭವನದಲ್ಲಿ ನಡೆಯಲಿದೆ.
ಸಂಜೆ ೫ ಗಂಟೆಯಿಂದ ೬.೩೦ ರ ವರೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಲಯನ್ಸ್ ಜಿಲ್ಲೆ ೩೧೭ ಡಿ ಜಿಲ್ಲಾ ಗವರ್ನರ್ ಎಸ್. ಸಂಜೀತ್ ಶೆಟ್ಟಿ ಜ್ಯೋತಿ ಪ್ರಜ್ವಲನೆಗೈಯಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ರಡಾ ಮಂಗಳೂರು ಅಧ್ಯಕ್ಷ ಪುಷ್ಪರಾಜ್ ಜೈನ್, ಉದ್ಯಮಿಗಳಾದ ಜೀತೇಂದ್ರ ಕೊಟ್ಟಾರಿ, ಪುರುಷೋತ್ತಮ ಆರ್. ಶೆಟ್ಟಿ, ಜಗದೀಶ್ ಶೆಟ್ಟಿ, ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ಬೋಳಾರ ಮಾಜಿ ಮೊಕ್ತೇಸರ ಸೀತಾರಾಮ್ ಎ. ಭಾಗವಹಿಸಲಿದ್ದಾರೆ.
ನಿಯೋಜಿತ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ, ನಿಯೋಜಿತ ಪ್ರಧಾನ ಕಾರ್ಯದರ್ಶಿ ಎ.ಕೃಷ್ಣ ಶೆಟ್ಟಿ ತಾರೆಮಾರ್, ನಿಯೋಜಿತ ಕೋಶಾಧಿಕಾರಿ ಕೆ. ಗೋಪಿನಾಥ ಶೆಟ್ಟಿ ಪದಗ್ರಹಣ ನಡೆಯಲಿದೆ.
ಬಪ್ಪನಾಡು ಮೇಳದ ಗಂಗಾಧರ ಮಣಿಯಾಣಿ, ಸುಂಕದಕಟ್ಟೆ ಮೇಳದ ವೆಂಕಪ್ಪ, ಸಸಿಹಿತ್ಲು ಭಗವತಿ ಮೇಳದ ಜಯ ಸುವರ್ಣ, ಪಾವಂಜೆ ಮೇಳದ ಲೋಕೇಶ್ ಮಲ್ಲ ಅವರಿಗೆ ಸನ್ಮಾನ, ಗೌರವ ಸಹಾಯಧನ ವಿತರಣೆ ನಡೆಯಲಿದೆ.
ಅಪರಾಹ್ನ ೩ ರಿಂದ ೪.೩೦ ರ ವರೆಗೆ ಮಂಗಳೂರು ಘಟಕದ ಮಹಿಳಾ ಸದಸ್ಯರಿಂದ ರುಕ್ಮಿಣಿ ಕಲ್ಯಾಣ ತಾಳಮದ್ದಳೆ ನಡೆಯಲಿದೆ. ೬.೩೦ ರಿಂದ ೯ ಗಂಟೆಯವರೆಗೆ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ವೀರ ಅಭಿಮನ್ಯು ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.