ಬೆಳ್ತಂಗಡಿ: ಗ್ರಾಮೀಣ ಭಾಗಗಳಲ್ಲಿ ಮರದ ಗೆಲ್ಲುಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗುವುದು ನಿರಂತರ ನಡೆಯುತ್ತಲೇ ಇರುತ್ತದೆ. ಮಳೆಗಾಲ ಕಾಲಿಟ್ಟ ಕೂಡಲೇ ಇದು ಇನ್ನಷ್ಟು ಹೆಚ್ಚುತ್ತದೆ. ಇದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕಕ್ಕಿಂಜೆ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯ ಲೈನ್ ಹಾದು ಹೋಗುವ ಚಾರ್ಮಾಡಿ, ಪಿಲಿಕಲ, ಮುಂಡಾಜೆ ಫೀಡರ್ ಗಳ ವ್ಯಾಪ್ತಿಯ ಅಪಾಯಕಾರಿ ಮರಗಳ ಗೆಲ್ಲುಗಳ ತೆರವು ಕೆಲಸ ಮಂಗಳವಾರ ಆರಂಭವಾಯಿತು.
ಕಕ್ಕಿಂಜೆ ಉಪಕೇಂದ್ರ ವ್ಯಾಪ್ತಿಯ ವಿದ್ಯುತ್ ಲೈನ್ ಅರಣ್ಯ ಹಾಗೂ ತೋಟಗಳ ಮಧ್ಯೆ ಹಾದು ಹೋಗುತ್ತದೆ. ಇಲ್ಲಿನ ಲೈನ್ ಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮರಗಳು ಇವೆ. ಇದರಲ್ಲಿ ಹಲವಾರು ಶಿಥಿಲಾವಸ್ಥೆಯನ್ನು ತಲುಪಿದ ಮರಗಳು ಇದ್ದು ಮರಗಳು ಹಾಗೂ ಗೆಲ್ಲುಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗುವುದು ಮಾಮೂಲು. ಮಳೆಗಾಲದಲ್ಲಂತು ಈ ಸಮಸ್ಯೆ ಆಗಾಗ ಕಂಡು ಬರುತ್ತದೆ.ವಿದ್ಯುತ್ ಲೈನ್ ಗಳ ಮೇಲೆ ತೆಂಗಿನ,ಅಡಕೆ ಗರಿಗಳು,ಬಿದಿರು ಇತ್ಯಾದಿ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.
ದಿನ ಗಟ್ಟಲೆ ವಿದ್ಯುತ್ ವ್ಯತ್ಯಯ
ಸಾಮಾನ್ಯವಾಗಿ ಸಂಜೆ ಬೆಳಿಕ ವಿದ್ಯುತ್ ಲೈನ್ ಗಳಲ್ಲಿ ಇಂತಹ ಸಮಸ್ಯೆ ಕಂಡು ಬಂದರೆ ಹಲವು ಪ್ರದೇಶಗಳಲ್ಲಿ ರಾತ್ರಿ ಇಡೀ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ. ಇದು ಇಲ್ಲಿನ ಹಲವು ಪ್ರದೇಶಗಳ ಜನರಿಗೆ ಮುಗಿಯದ ಗೋಳಾಗಿದೆ. ಒಂದೆಡೆ ಮರದ ಸಣ್ಣ ಗೆಲ್ಲೊಂದು ಬಿದ್ದರೂ ಇಡೀ ವ್ಯಾಪ್ತಿಗೆ ವಿದ್ಯುತ್ ಇಲ್ಲದ ಪರಿಸ್ಥಿತಿ ಏರ್ಪಡುತ್ತದೆ.
ಮುನ್ನೆಚ್ಚರಿಕೆ
ಪ್ರತಿ ಗ್ರಾಮಸಭೆ, ಜನಸಂಪರ್ಕ ಸಭೆಗಳಲ್ಲಿ ವಿದ್ಯುತ್ ಲೈನ್ ನ ಮರಗಳ ಗೆಲ್ಲುಗಳ ತೆರವಿಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ.ಕಲಾಪದ ಬಹು ಹೊತ್ತು ಇದಕ್ಕೆ ಮೀಸಲಾಗುತ್ತಿದೆ. ಇತ್ತೀಚೆಗೆ ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ಜರಗಿದ ಮುಂಗಾರು ಪೂರ್ವ ಸಿದ್ಧತಾ ಸಭೆಯಲ್ಲೂ ಈ ವಿಚಾರದ ಬಗ್ಗೆ ಚರ್ಚೆ ಉಂಟಾಗಿತ್ತು.ಇದೀಗ ಮೆಸ್ಕಾಂ ಮಳೆಗಾಲ ಕಾಲಿಡುವ ಸಮಯ ಹತ್ತಿರ ಬರುತ್ತಿದ್ದಂತೆ ಮರದ ಗೆಲ್ಲುಗಳ ತೆರವಿಗೆ ಮುಂದಾಗಿದೆ.
5ತಂಡ
ಒಟ್ಟು 25 ಜನರ ತಂಡವನ್ನು ಮರಗಳ ಗೆಲ್ಲು ತೆರವಿಗೆ ಸಿದ್ದಪಡಿಸಲಾಗಿದ್ದು, ಒಂದೊಂದು ತಂಡದಲ್ಲಿ 5 ಮಂದಿಯಂತೆ ವಿಂಗಡಿಸಲಾಗಿದ್ದು ಕೆಲಸ ನಡೆಸಲಾಗುತ್ತಿದೆ.ಕಕ್ಕಿಂಜೆ ಸಬ್ ಸ್ಟೇಷನ್ ವ್ಯಾಪ್ತಿಯ ಎಲ್ಲಾ ಕಡೆಯ ಕೆಲಸ ಪೂರ್ಣಗೊಳ್ಳಲು ಇನ್ನು ಸುಮಾರು 3 ದಿನಗಳಲ್ಲಿ ಕೆಲಸ ನಿರ್ವಹಿಸ ಬೇಕಾಗಬಹುದು ಎಂದು ಉಜಿರೆ ಮೆಸ್ಕಾಂನ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ ತಿಳಿಸಿದ್ದಾರೆ