ಮಂಗಳೂರು: ಮಾರ್ಚ್ 11 ರಂದು ಎಮ್ಸಿಸಿ ಬ್ಯಾಂಕಿನ ಪ್ರಧಾನ ಕಛೇರಿಯ ಪಿ ಎಫ್ ಎಕ್ಸ್ ಸಲ್ಡಾನ್ಹಾ ಮೆಮೊರಿಯಲ್ ಸಭಾಂಗಣದಲ್ಲಿ ಬ್ಯಾಂಕಿನ ಮಹಿಳಾ ಸಿಬಂದಿಯ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರೆವರೆಂಡ್ ಸಿಸ್ಟರ್ ಸಿಸಿಲಿಯ ಮೆಂಡೊನ್ಸಾ (ಪ್ರೊವಿನ್ಸಿಯಲ್ ಸುಪಿರೀಯರ್, ಬೆಥನಿ ಕೊಂಗ್ರಿಗೇಶನ್, ವಾಮಂಜೂರು, ಮಂಗಳೂರು) ಹಾಜರಿದ್ದರು.
ಬ್ಯಾಂಕಿನ ನಿರ್ದೇಶಕಿಯರಾದ ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಪ್ಲಾವಿಯ ಡಿಸೋಜ, ಶರ್ಮಿಳಾ ಮಿನೇಜಸ್, ಬ್ಯಾಂಕಿನ ಶಾಖಾ
ಪ್ರಬಂಧಕರಾದ ಜೆಸಿಂತಾ ಸೆರಾವೊ, ಬ್ಲಾಂಚ್ ಫೆರ್ನಾಂಡಿಸ್, ಸುನಿತಾ ಡಿಸೊಜ, ಐಡಾ ಪಿಂಟೊ, ಐರಿನ್ ಡಿಸೋಜ, ಜೆಸಿಂತಾ ಫೆರ್ನಾಂಡಿಸ್ ಮತ್ತು ವಿಲ್ಮಾ ಜ್ಯೋತಿ ಸಿಕ್ವೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊರವರು ಬ್ಯಾಂಕಿನ ಮಹಿಳಾ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿ, ಮಹಿಳಾ ದಿನಾಚರಣೆಯ ಪ್ರಾಮುಖ್ಯತೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಮಹತ್ವದ ಕೊಡುಗೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೆವರೆಂಡ್ ಸಿಸ್ಟರ್ ಸಿಸಿಲಿಯ ಮೆಂಡೊನ್ಸಾ ಅವರು ತಮ್ಮ ಭಾಷಣದಲ್ಲಿ ಎಮ್ಸಿಸಿ ಬ್ಯಾಂಕಿನ ಮಹಿಳಾ ಸಿಬಂದಿಯನ್ನು ಅಭಿನಂದಿಸಿದರು.
ಸಮಾಜಕ್ಕೆ ಮಹಿಳೆಯ ಮಹತ್ವದ ಕೊಡುಗೆಯ ಬಗ್ಗೆ ಜಾಗ್ರತಿ ಮೂಡಿಸುವುದು, ಸಮಾಜದಲ್ಲಿ ಮಹಿಳೆಯರ ಹಕ್ಕುಗಳು ಮತ್ತು
ಗೌರವದ ಮಹತ್ವವನ್ನು ಸಾರುವುದು ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಮಥರ್ ತೆರೆಸಾರವರು ಕುಷ್ಟ ರೋಗಿಗಳಿಗೆ, ಬಡವರಿಗೆ ಮತ್ತು ಸಮಾಜದಲ್ಲಿ ಹಿಂದುಳಿದವರಿಗೆ ಸಲ್ಲಿಸಿದ ಅನುಕರಣಿಯ ಸೇವೆಗಳನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಭಾರತದ ರಾಷ್ಟ್ರಪತಿಯೂ ಒಬ್ಬ ಮಹಿಳೆ ಎಂಬುದಕ್ಕೆ ಮಹಿಳೆಯರು ಹೆಮ್ಮೆ ಪಡಬೇಕು ಎಂದರು. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಅಂದರೆ, ಶಿಕ್ಷಣ, ಆರೋಗ್ಯ, ಆರ್ಥಿಕ, ರಾಜಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಶೋಧನೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ಮತ್ತು ಜವಬ್ದಾರಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ತಾಳ್ಮೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಬದ್ದತೆ, ನಾಯಕತ್ವ, ನಾವೀನ್ಯತೆ ಮತ್ತು ಸಹಾನುಭೂತಿಗಾಗಿ ಮಹಿಳೆಯರನ್ನು ಗುರುತಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಮಹಿಳೆಯರು ತಮ್ಮ ಆಲೋಚನೆ, ಮಾತು ಮತ್ತು ಕ್ರಿಯೆಯಲ್ಲಿ ಸಕಾರಾತ್ಮಕವಾಗಿರಬೇಕು ಎಂದು ಸಲಹೆ ನೀಡಿದರು.
ಬ್ಯಾಂಕಿನ ಎಲ್ಲಾ ಮಹಿಳೆಯರಿಗೆ ಅಬಿನಂದಿಸಿದ ಬ್ಯಾಂಕಿನ ನಿರ್ದೇಶಕರಾದ ಆಂಡ್ರೂ ಡಿಸೋಜ, ಕುಟುಂಬದ ಶ್ರೇಯೋಭಿವೃದ್ದಿಗೆ ಮಹಿಳೆಯರು ವಹಿಸುವ ಪಾತ್ರದ ಬಗ್ಗೆ ವಿವರಿಸಿದರು. ಮಹಿಳಾ ಸಬಲೀಕರಣ ಮತ್ತು ಪ್ರಗತಿಯ ಕುರಿತು ನಿರ್ದೇಶಕಿ ಐರಿನ್ ರೆಬೆಲ್ಲೊ ಮತನಾಡಿದರು.
ವೇದಿಕೆಯಲ್ಲಿ ಆಸೀನರಾಗಿದ್ದ ಮುಖ್ಯ ಅತಿಥಿ, ಬ್ಯಾಂಕಿನ ನಿರ್ದೇಶಕರು ಮತ್ತು ಶಾಖಾ ಪ್ರಬಂಧಕರನ್ನು ಸನ್ಮಾನಿಸಲಾಯಿತು. ಮಹಿಳಾ ಸಿಬ್ಬಂದಿಯ ಪರವಾಗಿ ಕಂಕನಾಡಿ ಶಾಖಾ ಪ್ರಬಂಧಕಿಯಾದ ಐಡಾ ಪಿಂಟೊ ಮಾತನಾಡಿ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದಕ್ಕಾಗಿ ಮಹಿಳಾ ಸಿಬ್ಬಂದಿಯ ಪರವಾಗಿ ಆಡಳಿತ ಮಂಡಳಿಗೆ ಕ್ರತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಹಿಳಾ ಸಿಬ್ಬಂದಿಯವರಿಗೆ ಬ್ಯಾಂಕಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹೂಗೂಚ್ಛ ನೀಡಿ ಶುಭಾಶಯವನ್ನು ಕೋರಿದರು. ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತರಾದ ಶಾಖಾ ವ್ಯವಸ್ಥಾಪಕ ಕ್ಲಿಫರ್ಡ್ ಡಿಕೊಸ್ತಾ ಮತ್ತು ಕಿರಿಯ ಸಹಾಯಕ ವಿಲಿಯಮ್ ಡಿಸೋಜರವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಮಹಿಳೆಯರ ಕುರಿತಾಗಿ ರಚಿಸಿದ ತಮ್ಮ ಸ್ವಂತ ಕವಿತೆಯನ್ನು ವಾಚಿಸಿದರು. ಬಂದರ್ ಪೋಲೀಸ್ ಠಾಣೆಯ ಉಪ ನಿರೀಕ್ಷರಾದ ಪುನಿತ್ ಗಾಂವ್ಕರ್ ಅವರು, ವಂಚಕರು ಸಾಮಾಜಿಕ ಮಧ್ಯಮಗಳಲ್ಲಿ ವಂಚನೆಗೆ ಬಳಸುವ ವಿವಿಧ ವಿಧಾನಗಳನ್ನು ವಿವರಿಸಿದರು.
ವಿವಿಧ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನಚ್ಚರಿಕೆಯ ಬಗ್ಗೆ ತಿಳಿ ಹೇಳಿದರು. ಯಾವುದೇ ಸೈಬರ್ ಅಪರಾಧಗಳನ್ನು ತಕ್ಷಣವೇ ವರದಿ ಮಾಡಲು ತುರ್ತು ಸಂಖ್ಯೆ ೧೧೨ ಮತ್ತು ಅಪರಾಧ ಸಹಾಯ ಸಂಖ್ಯೆ ೧೯೩೦ ಗೆ ಕರೆ ಮಾಡುವ ಮೂಲಕ ಪೋಲೀಸರು ಒದಗಿಸುವ ಸೇವೆಯನ್ನು ಬಳಸಿಕೊಳ್ಳುವಂತೆ ಅವರು ಕರೆ ನೀಡಿದರು.
ನೆಲ್ಸನ್ ಮೋನಿಸ್ ನಿರೂಪಿಸಿ, ಮಹಾ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿದರು. ನಿರ್ದೇಶಕರಾದ ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಎಲ್ರೋಯ್ ಕ್ರಾಸ್ಟೊ, ಸಿ.ಜಿ. ಪಿಂಟೊ, ಜೆ.ಪಿ. ರೊಡ್ರಿಗಸ್, ಅನಿಲ್ ಪತ್ರಾವೊ, ಡಾ| ಜೆರಾಲ್ಡ್ ಪಿಂಟೊ, ಮಾರ್ಸೆಲ್ ಎಮ್ ಡಿಸೋಜ, ಡೆವಿಡ್ ಡಿಸೊಜ, ಫೆಲಿಕ್ಸ್ ಡಿಕ್ರುಜ್, ಸುಶಾಂತ್ ಸಲ್ಡಾನ್ಹಾ, ಉಪ ಮಹಾಪ್ರಬಂಧಕ ರಾಜ್ ಮಿನೇಜಸ್, ಹಿರಿಯ ಪ್ರಬಂಧಕ ಡೆರಿಲ್ ಲಸ್ರಾದೊ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಸಭಾ ಕರ್ಯದ ನಂತರ ಸಾಂಸ್ಕçತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.