ಮಂಗಳೂರು: ಸತತ ಭೂಕಂಪನದಿಂದ ತತ್ತರಿಸಿರುವ ದಕ್ಷಿಣ ಕನ್ನಡ, ಕೊಡಗು ಗಡಿ ಭಾಗದ ಕೆಲವಡೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಈ ಬಾರಿ ಮತ್ತೆ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದೆ ಎಂದು ಹಲವರು ಮಾಹಿತಿ ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಇಲಾಖೆಗಳಿಂದ ಹೊರಬಿದ್ದಿಲ್ಲ. ಚೆಂಬು, ಸಂಪಾಜೆ, ಗೂನಡ್ಕ, ಅರಂತೋಡು, ತೊಡಿಕಾನ ಮುಂತಾದೆಡೆ ಭೂ ಕಂಪನದ ಅನುಭವವಾಗಿದೆ.
ಶುಕ್ರವಾರ ಬೆಳಗ್ಗೆ 10.09ರ ಸುಮಾರಿಗೆ ಮೊದಲು ಭೂಮಿಯ ತಳಭಾಗದಿಂದ ಭಾರೀ ಶಬ್ದ ಕೇಳಿಸಿದೆ. ಅದಾದ ಬಳಿಕ ಭೂಮಿನಡುಗಿದೆ ಎಂದು ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ. ಈ ಭಾಗದಲ್ಲಿ ಕಳೆದೊಂದು ತಿಂಗಳಿನಿಂದ ಭಾರೀ ಸದ್ದಿನೊಂದಿಗೆ ಹತ್ತಕ್ಕೂ ಹೆಚ್ಚು ಭಾರಿ ಭೂಕಂಪನದ ಅನುಭವವಾಗಿದ್ದು, ಜನತೆ ಆತಂಕದಲ್ಲಿಯೇ ದಿನಕಳೆಯುತ್ತಿದ್ದಾರೆ.