ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ಜನವರಿ 7ರ ಭಾನುವಾರದಂದು ನಗರದ ಮಿಲಾಗ್ರಿಸ್ ಚರ್ಚ್ನಿಂದ ರೊಸಾರಿಯೊ ಕೆಥೆಡ್ರಲ್ ಚರ್ಚ್ವರೆಗೆ ನಡೆಯಿತು. ಸಾವಿರಾರು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
ಕ್ರಿಸ್ತ ಜಯಂತಿ-2025ರ ಜುಬಿಲಿ ಪ್ರಯುಕ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ‘2024′ ಅನ್ನು ‘ಪ್ರಾರ್ಥನೆಯ ವರ್ಷ’ ಎಂದು ಘೋಷಿಸಿರುವುದರಿಂದ “ಪ್ರಾರ್ಥನೆ ಮೂಲಕ ದೇವರೊಡನೆ ಮತ್ತು ಪರರೊಡನೆ ಸಂಬಂಧ ಬೆಳೆಸೋಣ” ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಮೆರವಣಿಗೆಗೂ ಮುನ್ನ ಮಿಲಾಗ್ರಿಸ್ ಚರ್ಚ್ನಲ್ಲಿ ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಾಮೂಹಿಕವಾಗಿ ಬಲಿಪೂಜೆಯನ್ನು ಸಲ್ಲಿಸಿದರು. ಯೇಸುವಿನ ದೈವದರ್ಶನ ಮಹೋತ್ಸವದಂದು ಏರ್ಪಡಿಸಿದ ಈ ಮೆರವಣಿಗೆಯು ಯೇಸು ಕ್ರಿಸ್ತರು ತಮ್ಮನ್ನು ಹುಡುಕಿ ಬಂದ ಜ್ಯೋತಿಷ್ಯರಿಗೆ ತಮ್ಮ ಮೊದಲ ದೈವ ದರ್ಶನ ನೀಡಿದ ಘಟನೆಯನ್ನು ಸ್ಮರಿಸುತ್ತದೆ. ಈ ಹಬ್ಬವನ್ನು ‘ಎಪಿಫನಿ’, ‘ಥಿಯೋಫನಿ’ ಅಥವಾ ‘ತ್ರಿ ಕಿಂಗ್ಸ್ ಡೇ’ ಎಂದೂ ಕರೆಯುತ್ತಾರೆ.
ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಆವರು ತಮ್ಮ ಧರ್ಮೋಪದೇಶದಲ್ಲಿ “ದೇವರನ್ನು ಮೊದಲು ಪವಿತ್ರ ಗ್ರಂಥಗಳಲ್ಲಿ ಕಂಡುಕೋಳ್ಳೋಣ, ನಂತರ ನಮ್ಮ ಹಾಗೂ ಪರಸ್ಪರರ ಹೃದಯಗಳಲ್ಲಿ ಆತನ ಸಾಮಿಪ್ಯವನ್ನು ಗುರುತಿಸೋಣ. ಪವಿತ್ರಗ್ರಂಥ ಬೈಬಲ್ ನಮ್ಮ ಕೈಯಲ್ಲಿರುವ ನಕ್ಷತ್ರ. ಆ ನಕ್ಷತ್ರವನ್ನು ನಮ್ಮದಾಗಿಸಿ ನಿತ್ಯ ಧ್ಯಾನಿಸಿದ್ದಲ್ಲಿ ಯೇಸುವಲ್ಲಿ ಸೇರುವ ದಾರಿಯು ಗೋಚರಿಸುವುದು. ದೇವರ ವಾಕ್ಯ ನಮ್ಮ ದಾರಿಗೆ ದೀಪವೂ, ಆ ದೀಪದ ಬೆಳಕಿನಲ್ಲಿ ಸದಾ ನಡೆದು ಯೇಸುವನ್ನು ಮಹಿಮೆಪಡಿಸೊಣ”, ಎಂದು ಬೋಧಿಸಿದರು.
ಪೂಜಾಂತ್ಯಕ್ಕೆ ಆರಂಭಗೊಂಡ ಮೆರವಣಿಗೆಯ ಜೊತೆ, ಪವಿತ್ರ ಪ್ರಸಾದವನ್ನು ಹೊತ್ತೊಯ್ದ ಅಲಂಕೃತ ವಾಹನವು ಮಿಲಾಗ್ರಿಸ್ ಚರ್ಚ್ನಿಂದ ಪ್ರಾರಂಭವಾಗಿ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಹಂಪನಕಟ್ಟೆ, ಕ್ಲಾಕ್ ಟವರ್ ಸರ್ಕಲ್, ಎ.ಬಿ ಶೆಟ್ಟಿ ಸರ್ಕಲ್ ಮತ್ತು ನೆಹರು ವೃತ್ತದ ಮೂಲಕ ಸಾಗಿತು.
ಮೆರವಣಿಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತಾದಿಗಳು ನಗರದ ರಸ್ತೆಗಳಲ್ಲಿ ದೇವರನ್ನು ಮಹಿಮೆಪಡಿಸುತ್ತಾ, ಆರಾಧಿಸುತ್ತಾ, ಬ್ಯಾಂಡ್-ಸಂಗೀತ ಮತ್ತು ಭಕ್ತಿ ಗೀತೆಗಳೊಂದಿಗೆ, ಜನಸಾಮನ್ಯರಿಗೆ ಅಡಚಣೆಯನ್ನುಂಟು ಮಾಡದೆ ಎರಡು ಸಾಲುಗಳಲ್ಲಿ ಸಾಗಿತು.
ಬಿಷಪ್ ನೇತೃತ್ವದ ಮೆರವಣಿಗೆಯು ರೊಸಾರಿಯೊ ಕೆಥೆಡ್ರಲ್ ಚರ್ಚ್ ಆವರಣದಲ್ಲಿ ಆರಾಧನೆಯೊಂದಿಗೆ ಸಮಾಪನಗೊಂಡಿತು.
ರೊಸಾರಿಯೋ ಕೆಥೆಡ್ರಲ್ ಚರ್ಚ್ ಮೈದಾನದಲ್ಲಿ ಕಾಸರಗೋಡಿನ ವರ್ಕಾಡಿ ಚರ್ಚ್ನ ಧರ್ಮಗುರುಗಳಾದ ವಂದನೀಯ ಬಾಸಿಲ್ ವಾಸ್ ಪ್ರವಚನ ಬೋಧಿಸಿದರು. ಅವರು ‘ಪ್ರಾರ್ಥನೆಯ’ ಬಗ್ಗೆ ಒಳನೋಟಗಳನ್ನು ನೀಡುತ್ತಾ ದೈವಿಕ ಮತ್ತು ಮಾನವೀಯ ಸಂಬಂಧವನ್ನು ಬೆಳೆಸುವಲ್ಲಿ ಅದರ ಪಾತ್ರವನ್ನು ಒತ್ತಿ ಹೇಳಿದರು.
“ನಾವು ಡಿಜಿಟಲ್ ಕ್ಷೇತ್ರಕ್ಕೆ ಗಮನಾರ್ಹ ಸಮಯವನ್ನು ವಿನಿಯೋಗಿಸುವ ಈ ಕಾಲಘಟ್ಟದಲ್ಲಿ, ‘ಪ್ರಾರ್ಥನೆಗೆ ಸಮಯವಿಲ್ಲ’ ಎಂದು ಹೇಳುವುದರಲ್ಲ್ಲಿ ಆರ್ಥವಿಲ್ಲ. ಈ ಆಧುನಿಕ ಸಂವಹನ ತಂತ್ರಜ್ಞಾನವ ನ್ನು ಕೇವಲ ಮಾನವ ಸಂಬಂಧಗಳನ್ನು ಬೆಳೆಸುವಲ್ಲಿ ಮಾತ್ರ ಉಪಯೋಗಿಸದೆ, ಪರರಿಗೋಸ್ಕರ ಪ್ರಾರ್ಥಿಸುವ ಮೂಲಕ ದೈವರೋಂದಿಗೆ ಸಂಬಂಧ ಉಂಟುಮಾಡುವಲ್ಲಿ ಸಹಕಾರಿಯಾಗಬೇಕು” ಎಂದು ಒತ್ತಿ ಹೇಳಿದರು. “ಇಂದಿನ ಡಿಜಿಟಲ್ ಯುಗ ನಾವು ಆನ್ಲೈನ್ನಲ್ಲಿ ತೊಡಗಿಸಿಕೊಳ್ಳುವ ಪ್ರತಿ ಬಾರಿಯೂ, ತೀವ್ರ ಅಗತ್ಯವಿರುವವರಿಗೆ ವಿಡಿಯೋ ಕರೆ ಮಾಡಿ ಪ್ರಾರ್ಥನೆಗಳನ್ನು ವಿಸ್ತರಿಸಲು ಮತ್ತು ಆಧ್ಯಾತ್ಮಿಕ ಸಂಪರ್ಕಕ್ಕಾಗಿ ಹಲವಾರು ಮಾರ್ಗಗಳನ್ನು ನೀಡುತ್ತದೆ.”
ಫಾದರ್ ಬಾಜಿಲ್ ವಾಸ್ ಪ್ರಾರ್ಥನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ, “ನಮ್ಮ ಪ್ರಾರ್ಥಿಸುವ ಕೈಗಳು, ಕೆಳಕ್ಕೆ ಬಿದ್ದವರನ್ನು ಮೇಲಕ್ಕೆತ್ತಲು, ಸಂಕಷ್ಟದಲ್ಲಿರುವವರಿಗೆ ಸಾಂತ್ವನ ನೀಡಲು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ವಿಸ್ತರಿಸದಿದ್ದರೆ, ಆಂತಹ ಪ್ರಾರ್ಥನೆ ಫಲಹೀನವಾದುದು ಮತ್ತು ಅದು ನಮ್ಮಲ್ಲಿ ದೈವಿಕ ಮತ್ತು ಮಾನವ ಸಂಬಂಧಗಳನ್ನು ಒಗ್ಗೂಡಿಸುವಲ್ಲಿ ವಿಫಲಗೋಳಿಸುವುದು” ಎಂದು ಬೋಧಿಸಿದರು.
ರೊಸಾರಿಯೊದಲ್ಲಿ ನಡೆದ ಆರಾಧನೆ ವಿಧಿಯನ್ನು ಕುಲುಶೇಖರ ಚರ್ಚ್ನ ಧರ್ಮಗುರುಗಳಾದ ವಂದನೀಯ ಕ್ಲಿಫರ್ಡ್ ಫೆನಾರ್ಂಡಿಸ್ ಮತ್ತು ಲೂಡ್ರ್ಸ್ ಸೆಂಟ್ರಲ್ ಸ್ಕೂಲ್ನ ಪ್ರಾಂಶುಪಾಲರಾದ ವಂದನೀಯ ರಾಬರ್ಟ್ ಡಿಸೋಜಾರವರು ಭಕ್ತಿಯುತವಾಗಿ ನಡೆಸಿದರು.
ಕೊನೆಯಲ್ಲಿ ಧರ್ಮಪ್ರಾಂತ್ಯದ “ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ”ದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಿಷಪ್ ಆತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮೆರವಣಿಗೆಯ ಯಶಸ್ಸಿಗೆ ಕಾರಣಾರಾದ ಎಲ್ಲರನ್ನು ಸ್ಮರಿಸಿದರು ಹಾಗೂ ಸಾಕ್ಷಿಯಾದ ಎಲ್ಲಾ ವಿಶ್ವಾಸಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.