ಮಂಗಳೂರು: ಬಿಕರ್ನಕಟ್ಟೆ ಕಾರ್ಮೆಲ್ಹಿಲ್ ಬಾಲ ಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜ.೧೪ ಮತ್ತು ೧೫ರಂದು ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ನವದಿನಗಳ ಸಿದ್ಧತೆ -ನೊವೇನಾ ಪ್ರಾರ್ಥನೆ ಜ.೫ರಿಂದ ಜನವರಿ ೧೩ರ ವರೆಗೆ ಜರುಗಲಿದೆ ಎಂದು ಕ್ಷೇತ್ರದ ನಿರ್ದೇಶಕ ವಂದನೀಯ ಫಾ| ರೋವೆಲ್ ಡಿ’ಸೋಜಾ ತಿಳಿಸಿದ್ದಾರೆ.
ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೧೪ರಂದು ಬೆಳಗ್ಗೆ ೧೦.೩೦ಕ್ಕೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಎಪಿಸ್ಕೋಪಲ್ ವಿಕಾರ್ ಅತೀ ವಂದನೀಯ ಡೇನಿಯಲ್ ವೇಗಸ್ ನೆರವೇರಿಸಲಿದ್ದಾರೆ. ಸಂಜೆ ೬ಗಂಟೆಗೆ ಹೊಸದಿಲ್ಲಿಯ ಧರ್ಮಾಧ್ಯಕ್ಷ ಅತೀ ವಂದನೀಯ ದೀಪಕ್ ವಲೇರಿಯನ್ ತಾವ್ರೋ ಅವರ ಅಧ್ಯಕ್ಷತೆಯಲ್ಲಿ ಬಲಿಪೂಜೆ ನೆರವೇರಲಿದೆ. ಜ. ೧೫ರಂದು ಬೆಳಗ್ಗೆ ೧೦.೩೦ಕ್ಕೆ ಸಾಂಭ್ರಮಿಕ ಬಲಿಪೂಜೆ ರೋಮ್ನ ಡಫಿನೆಟರ್ ಜನರಲ್ ಅತೀ ವಂದನೀಯ ಪಿಯುಸ್ ಜೇಮ್ಸ್ ಡಿಸೋಜಾ ಹಾಗೂ ಸಂಜೆ ೬ ಗಂಟೆಗೆ ಬಲಿಪೂಜೆ ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜೆರಾಲ್ ಅತೀ ವಂದನೀಯ ಮ್ಯಾಕ್ಸಿಮ್ ನೊರೊನ್ಹಾ ಅಧ್ಯಕ್ಷತೆಯಲ್ಲಿ ನೆರವೇರುವುದು ಎಂದರು.
ಈ ಎರಡು ದಿನದ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ ನೊವೇನಾ ಪ್ರಾರ್ಥನೆ ಜ.೫ ರಿಂದ ೧೩ರ ವರೆಗೆ ನಡೆಯಲಿದೆ. ಪ್ರತಿದಿನ ೯ಬಲಿಪೂಜೆಗಳು ನಡೆಯಲಿದ್ದು, ಬೆಳಗ್ಗೆ ೬, ೭.೩೦, ೯, ೧೦.೩೦ಕ್ಕೆ ಹಾಗೂ ಮಧ್ಯಾಹ್ನ ೧ಗಂಟೆಗೆ ಕೊಂಕಣಿ ಭಾಷೆಯಲ್ಲಿ ನಡೆಯಲಿದೆ. ಸಂಜೆ ೪ಗಂಟೆಗೆ ಮಲಯಾಳಂ, ೫ಗಂಟೆಗೆ ಇಂಗ್ಲಿಷ್ ಹಾಗೂ ೭.೧೫ಕ್ಕೆ ಕನ್ನಡದಲ್ಲಿ ಬಲಿಪೂಜೆ ಪುಣ್ಯಕ್ಷೇತ್ರದೊಳಗೆ ನಡೆಯಲಿದೆ. ನವದಿನಗಳ ಪ್ರಮುಖ ಬಲಿಪೂಜೆ ಸಂಜೆ ೬ಗಂಟೆಗೆ ಮೈದಾನದಲ್ಲಿ ನಡೆಯಲಿದೆ. ಪರಮ ಪ್ರಸಾದದ ಆರಾಧನೆ ಪ್ರತಿ ನವೆನಾ ದಿನಗಳಲ್ಲಿ ೧೧.೩೦ರಿಂದ ೧೨.೪೫ ವರೆಗೆ ನಡೆಯಲಿದೆ ಎಂದರು.
ಮಹೋತ್ಸವಕ್ಕೆ ಚಾಲನೆ
ವಾರ್ಷಿಕ ಮಹೋತ್ಸವಕ್ಕೆ ಜ. ೪ರಂದು ವಿಧ್ಯುಕ್ತ ಚಾಲನೆ ದೊರೆಯಲಿದ್ದು, ಸಂಜೆ ೪ ಗಂಟೆಗೆ ಹೊರಕಾಣಿಕೆ ಅನಂತರ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ. ನೊವೆನಾ ದಿನಗಳಲ್ಲಿ ಪ್ರತಿದಿನ ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದರು. ಇದೇ ವೇಳೆ ಬಾಲಯೇಸು ಪುಣ್ಯಕ್ಷೇತ್ರದ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆಗೊಂಡಿತು.
ಸುದ್ದಿಗೋಷ್ಠಿಯಲ್ಲಿ ಬಾಲಯೇಸುವಿನ ಪುಣ್ಯಕ್ಷೇತ್ರದ ಗುರುಮಠದ ಮುಖ್ಯಸ್ಥ ವಂದನೀಯ ಫಾ| ಚಾರ್ಲ್ಸ್ ಸೆರಾವೊ, ಕಾರ್ಮೆಲ್ ಕಿರಣ್ ಮೀಡಿಯಾ ನಿರ್ದೇಶಕ ವಂದನೀಯ ಫಾ| ಸ್ಟೀಫನ್ ಲೋಬೋ, ಸ್ಟ್ಯಾನ್ಲಿ ಪಿಂಟೋ ಬಿಕರ್ನಕಟ್ಟೆ ಉಪಸ್ಥಿತರಿದ್ದರು.