ಮಂಗಳೂರು: ಸ್ವಚ್ಚ ಸುಂದರ ಮಂಗಳೂರು ಪರಿಕಲ್ಪನೆಯಡಿ ನಗರದ ಬಸ್ ತಂಗುದಾಣಗಳನ್ನು ಸ್ವಚ್ಛ, ಸುಂದರ ಮತ್ತು ಸುರಕ್ಷಿತಗೊಳಿಸುವ ಸ್ಪರ್ಧಾರೂಪದ ಅಭಿಯಾನಕ್ಕೆ ಡಿ.16ರಂದು ಬೆಳಗ್ಗೆ 9 ಗಂಟೆಗೆ ರಥಬೀದಿಯ ಬಸ್ ತಂಗುದಾಣದಲ್ಲಿ ಚಾಲನೆ ದೊರೆಯಲಿದೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಮಹನಗರ ಪಾಲಿಕೆ ಸಹಯೋಗದಲ್ಲಿ ನಡೆಯುವ ಅಭಿಯಾನವನ್ನು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಉದ್ಘಾಟಿಸುವರು. ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಮಹಾನಗರ ಪಾಲಿಕೆಯ ಕಮಿಷನರ್ ಅಕ್ಷಯ್ ಶ್ರೀಧರ್, ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಸಭಾಪತಿ ಸಿ.ಎ. ಶಾಂತಾರಾಮ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಭಾಗವಹಿಸುವರು.
ದಕ್ಷಿಣ ಕನ್ನಡಜಿಲ್ಲೆಯ ಎಲ್ಲ ಕಾಲೇಜುಗಳ ಯುವ ರೆಡ್ ಕ್ರಾಸ್ ಘಟಕಗಳು ತಮ್ಮ ಕಾಲೇಜಿನ ಹತ್ತಿರ ಇರುವ ಬಸ್ಸು ತಂಗುದಾಣಗಳನ್ನು ನಿತ್ಯ ಸ್ವಚ್ಚಗೊಳಿಸಿ, ಹೂವಿನ ಗಿಡಗಳಿಂದ ಅಲಂಕರಿಸಿ ಸಾಮಾಜಿಕ ಶುಚಿತ, ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಫಲಕಗಳನ್ನು ಅಳವಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿವೇಕಾನಂದ ಜಯಂತಿಯ ಆಚರಣೆ ಸಂದರ್ಭದಲ್ಲಿ ಬಹುಮಾನ ಮತ್ತು ಪಶಸ್ತಿ ಪತ್ರಗಳನ್ನು ನೀಡಲಾಗುತ್ತದೆ. ಮಂಗಳೂರು ವಿಶ್ವವಿದ್ಯಾ ನಿಲಯ ನೋಡಲ್ ಅಧಿಕಾರಿಗಳು ಪತ್ರಕರ್ತರ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಘಟಕದ ಪದಾಧಿಕಾರಿಗಳ ಆಯ್ಕೆ ಸಮಿತಿ ವಿಜೇತ ತಂಡಗಳನ್ನು ಘೋಷಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.