ಮಂಗಳೂರು: ಉತ್ತರ ಪ್ರದೇಶ, ಬಿಹಾರದಲ್ಲಿ ಜೈಲಿನಲ್ಲಿದ್ದರೂ, ಚುನಾವಣೆಗೆ ಸ್ಪರ್ಧಿಸುವುದನ್ನು ಕೇಳಿದ್ದೇವೆ. ಅಂತಹ ಪರಿಪಾಠ ದಕ್ಷಿಣದ ಅದರಲ್ಲೂ ಕರ್ನಾಟಕದಲ್ಲಿ ನಾವು ಕಂಡು ಕೇಳಿದ್ದಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಎಸ್ ಡಿ ಪಿ ಐ ಪಕ್ಷ ಪುತ್ತೂರು ಕ್ಷೇತ್ರಕ್ಕೆ ಜೈಲಿನಿರುವ ವ್ಯಕ್ತಿಯನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ದೇಶದ್ರೋಹಿ ಚಟುವಟಿಕೆಯೆಂದು ಎನ್ಐಎ ಅಧಿಕಾರಿಗಳು ಬಂಧಿಸಿ ಜೈಲಿಗೆ ತಳ್ಳಿರುವ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಶಾಫಿ ಬೆಳ್ಳಾರೆಯನ್ನು ಅಭ್ಯರ್ಥಿಯಾಗಿ ಘೋಷಿಸಿದೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಎಷ್ಟರ ಮಟ್ಟಿಗೆ ಸಂಚಲನ ಎಬ್ಬಿಸಿತ್ತೆಂದರೆ, ಹಲವಾರು ಕೊಲೆ ಕೃತ್ಯಗಳ ಕಾರಣಕ್ಕಾಗಿ ಪಿಎಫ್ಐ ಸಂಘಟನೆಯನ್ನೇ ನಿಷೇಧ ಮಾಡಲಾಗಿತ್ತು. ಎಸ್ಬಿಪಿಐ ಮತ್ತು ಪಿಎಫ್ಐ ಸಂಘಟನೆಯಲ್ಲಿ ಪ್ರಮುಖರಾಗಿದ್ದವರನ್ನು ಎನ್ಐಎ ಅಧಿಕಾರಿಗಳು ಪ್ರಕರಣದಲ್ಲಿ ಬಂಧಿಸಿದ್ದರು. ಇದೀಗ ಎಸಿಪಿಐ ಪುತ್ತೂರಿನಲ್ಲಿ ಪ್ರವೀಣ್ ಕೊಲೆ ಪ್ರಕರಣಕ್ಕೆ ಸ್ಕೆಚ್ ಹಾಕಿದ್ದ ಆರೋಪಿಯನ್ನೇ ಕಣಕ್ಕಿಳಿಸಿ ಸಂಚಲನ ಎಬ್ಬಿಸಿದೆ.
ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿಯಾಗಿದ್ದ ಶಾಫಿ ಬೆಳ್ಳಾರೆಯೇ ನಮ್ಮ ಅಭ್ಯರ್ಥಿಯೆಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಘೋಷಣೆ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಪುತ್ತೂರಿನಲ್ಲಿ ನಡೆದ ಎಸಿಪಿಐ ಸಮಾವೇಶದಲ್ಲಿ ಘೋಷಣೆಯನ್ನ ಮಾಡಿದ್ದಾರೆ.