ಮಂಗಳೂರು, ಜ.26: ರಾಜ್ಯಗಳ ಗಡಿಭಾಗಗಳಲ್ಲಿ ಪರಸ್ಪರ ಸೌಹಾರ್ದಯುತವಾಗಿ ವರ್ತಿಸುವ ಮೂಲಕ ಭಾಷಾ ಸಾಮರಸ್ಯವನ್ನು ಮೆರೆಯಬೇಕು ಎಂದು ಶಾಸಕರಾದ ಸಂಜೀವ ಮಠಂದೂರು ಅಭಿಪ್ರಾಯಪಟ್ಟರು.
ಅವರು ಜ.26ರ ಗುರುವಾರ ಪುತ್ತೂರಿನ ವಿವೇಕಾನಂದ ಕಾಲೇಜಿನ ಗೋಲ್ಡನ್ ಜುಬಿಲಿ ಹಾಲ್ನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪುತ್ತೂರು ನೃತ್ಯೋಪಾಸನಾ ಕಲಾ ಕೇಂದ್ರದ ವತಿಯಿಂದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಪುತ್ತೂರು ಇವರ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗಡಿನಾಡ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಸರಗೋಡು ಭಾಗದ ಕನ್ನಡ ಶಾಲೆಗಳ ಪುನಃಶ್ಚೇತನ ಕಾರ್ಯ ರಾಜ್ಯದಿಂದ ಆಗಲಿದೆ, ವ್ಯಕ್ತಿಗೆ ಬದುಕಿನಲ್ಲಿ ಕಲಿಕೆ ಎಂಬುದು ನಿರಂತರವಾಗಿರಬೇಕು. ಜೀವನ ಪೂರ್ತಿ ಸಾಧನಕನಾಗಿ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯವಾಗಬೇಕು. ಗಡಿನಾಡಿನಲ್ಲಿರುವ ಕನ್ನಡಿಗರು ಈ ನಾಡಿನ ಸಂಸ್ಕೃತಿಗೆ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿ, ಸಾಂಸ್ಕೃತಿಕವಾಗಿ ಒಂದು ಎಂಬ ಚಿಂತನೆಯಲ್ಲಿ ದೇಶ ನಿಂತಿದೆ. ವಿದೇಶಿಗರ ನಿರಂತರ ಆಕ್ರಮಣವನ್ನು ವಿರೋಧಿಸಿ ತನ್ನತನವನ್ನು ಭಾರತ ಉಳಿಸಿಕೊಂಡಿದೆ. ಗಡಿನಾಡಿ ಉತ್ಸವದ ಮೂಲಕ ಭಾಷೆ – ಪದ್ಧತಿ ಒಂದೇ ಎಂಬುದನ್ನು ತೋರಿಸುವ ಪ್ರಯತ್ನ ನಡೆಯುತ್ತಿದೆ. ಭಾರತದ ಸಂಸ್ಕೃತಿ ವಿಭಿನ್ನವಾಗಿದ್ದು, ದೇವರನ್ನು ಬಿಟ್ಟು ದೇಶ ಇಲ್ಲ ಎಂದರು.
ನಗರ ಸಭೆ ಅಧ್ಯಕ್ಷ ಜೀವಂಧರ ಜೈನ್, ಪೂಡಾ ಅಧ್ಯಕ್ಷ ಬಾಮಿ ಅಶೋಕ ಶೆಣೈ ಉಪಸ್ಥಿತರಿದ್ದರು.
ಸಿಂಚನಾ ಭಟ್ ಪ್ರಾರ್ಥಿಸಿದರು. ಉಪನ್ಯಾಸಕಿ ಮೈತ್ರಿ ಭಟ್ ಸ್ವಾಗತಿಸಿದರು. ನೃತ್ಯೋಪಾಸನಾ ಕಲಾ ಕೇಂದ್ರದ ನೃತ್ಯಗುರು ಶಾಲಿನಿ ಆತ್ಮಭೂಷಣ್ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ವಿಷ್ಣು ಗಣಪತಿ ಭಟ್ ವಂದಿಸಿದರು. ಸ್ನಾತಕೋತ್ತರ ವಿಭಾಗ ಡೀನ್ ಡಾ. ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.
ಐವರು ಸಾಧಕರಿಗೆ ಗೌರವ:
ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್, ಪುತ್ತೂರಿನ ಚರ್ಮವಾದ್ಯ ತಯಾರಕ ರಾಜರತ್ನಂ ದೇವಾಡಿಗ, ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ರಾಮಕೃಷ್ಣ ಮಯ್ಯ, ಹಿರಿಯ ಅರ್ಥಶಾಸ್ತ್ರಜ್ಞ ಡಾ.ವಿಘ್ನೇಶ್ವರ ವರ್ಮುಡಿ, ಎಡನೀರು ಉಡುಪುಮೂಲೆ ಭೂಮಿಕಾ ಪ್ರತಿಷ್ಠಾನದ ಅನುಪಮಾ ರಾಘವೇಂದ್ರ ಸೇರಿ ಐವರು ಸಾಧಕರನ್ನು ಸನ್ಮಾನಿಸಲಾಯಿತು.