ಮಂಗಳೂರು: ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಹರಿಪದವು ಎಂಬಲ್ಲಿ ಹುಲಿವೇಷಧಾರಿ ಜಯಾನಂದ ಆಚಾರ್ಯ ಎಂಬವರನ್ನು ಕೊಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೊಲೆ ಆರೋಪಿ ಕುಂಜತ್ತಬೈಲ್ ದೇವಿನಗರದ ರಾಜೇಶ್ ಪೂಜಾರಿ ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹುಲಿ ವೇಷಧಾರಿ ಯಾಗಿದ್ದ ಜಯಾನಂದ ಆಚಾರ್ಯ ಮೃತದೇಹ ಕುತ್ತಿಗೆಗೆ ದಾರ ಬಿಗಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿತ್ತು.
ಈ ಬಗ್ಗೆ ಜಯಾನಂದರ ಸಹೋದರ ಅಚ್ಯುತ ಆಚಾರ್ಯ ಎಂಬವರು ಕೊಲೆ ಶಂಕೆ ವ್ಯಕ್ತಪಡಿಸಿ ಕಾವೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಕಾವೂರು ಪೊಲೀಸರು ತನಿಖೆ ನಡೆಸಿದಾಗ ಆರೋಪಿ ರಾಜೇಶ್ ಪೂಜಾರಿ ಕೊಲೆ ನಡೆದಿರುವುದಾಗಿ ತಿಳಿದು ಬಂದಿದ್ದು ಅದರಂತೆ ಆತನನ್ನು ಮಂಗಳವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.