ಮಂಗಳೂರು: ಭಾರತ ಸರಕಾರದ ಉದ್ಯಮವಾದ ಕುದುರೇಮುಖ ಕಬ್ಬಿಣದ ಅದಿರು ಕಂಪೆನಿ ಕಳೆದ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ 2022ರ ಆರ್ಥಿಕ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ 146 ಕೋ.ರೂ. ನಷ್ಟ ಅನುಭವಿಸಿದೆ ಎಂದು ಕುದುರೇಮುಖ ಕಬ್ಬಿಣದ ಅದಿರು ಕಂಪೆನಿ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಟಿ.ಸಾಮಿನಾಥನ್ ಹೇಳಿದರು.
ಮಂಗಳೂರಿನಲ್ಲಿ ಶುಕ್ರವಾರದಂದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಟಿ.ಸಾಮಿನಾಥನ್ ಭಾರತ ಸರಕಾರ ರಫ್ತು ಸುಂಕ ವಿಧಿಸಿದ್ದರಿಂದ ಕಂಪೆನಿಯ ಉತ್ಪಾದನಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಇದು ಸಂಸ್ಥೆಯ ಆರ್ಥಿಕ ಲಾಭದ ಮೇಲೆ ಪರಿಣಾಮ ಬೀರಿತು ಎಂದರು.
ಭಾರತ ಸರಕಾರ ಕಳೆದ ವರ್ಷದ ನವೆಂಬರ್ ದಿನಾಂಕ 19ರಿಂದ ಕಬ್ಬಿಣದ ಅದಿರುಂಡೆ ಮೇಲಿನ 45% ಶುಲ್ಕವನ್ನು ಹಿಂಪಡೆಯಿತು.ಈಗ ಸಂಸ್ಥೆಯು ಸವಾಲುಗಳನ್ನು ಜಯಿಸಲು ಮುಂದಾಗಿದೆ ಎಂದೂ ಹೇಳಿದರು.
ದೇವದಾರಿ ಗಣಿಗಾರಿಕೆಗೆ ಹಂತ ಎರಡರ ಅರಣ್ಯ ತೆರವು ಯೋಜನೆಗೆ ಅನುಮೋದನೆ ಲಭಿಸಿದೆ.ಇಲ್ಲಿ ಸಂಸ್ಥೆಯು 388 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಾರಿಕೆ ಮಾಡಲು ಕರ್ನಾಟಕ ಸರಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜೊತೆ ಗುತ್ತಿಗೆ ಕರಾರು ಪತ್ರವನ್ನು ಕಾರ್ಯಗತಗೊಳಿಸಿದೆ.ಹಾಗು 329.17 ಕೋ.ರೂ.ಗಳ ಸ್ಟ್ಯಾಂಪ್ ಶುಲ್ಕ ಹಾಗು ನೋಂದಣಿ ಶುಲ್ಕವನ್ನು ಪಾವತಿ ಮಾಡಿದೆ ಎಂದವರು ವಿವರಿಸಿದರು.
ಮಂಗಳೂರಿನ ಊದು ಕುಲುಮೆ ಘಟಕದಲ್ಲಿ ಖನಿಜ ಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದ್ದು, ಅದಕ್ಕೆ ಎನ್ .ಎ.ಬಿ.ಎಲ್. ಮಾನ್ಯತೆ ಲಭಿಸಿದೆ ಎಂದರು.
ವಾಣಿಜ್ಯ ವಿಭಾಗದ ನಿರ್ದೇಶಕ ಬಿ.ಕೆ.ಮೊಹಪಾತ್ರ ಉಪಸ್ಥಿತರಿದ್ದರು.