ಮಂಗಳೂರು: ಶತಮಾನದ ಹೊಸಿಲಿನಲ್ಲಿರುವ ಕರ್ಣಾಟಕ ಬ್ಯಾಂಕಿಗೆ ಕನ್ನಡ ಸಾಹಿತ್ಯ ಪರಿಷತ್ನಿಂದ ಸಮ್ಮಾನದ ಗೌರವ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ ಕನ್ನಡ ನಾಡು-ನುಡಿ, ಸಂಸ್ಕೃತಿ ಮತ್ತು ಕನ್ನಡ ಸ್ವಾಭಿಮಾನಾಭಿವೃದ್ಧಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಹಾವೇರಿಯಲ್ಲಿ ನಡೆಯುತ್ತಿರುವ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.
ಬ್ಯಾಂಕಿನ ಆಡಳಿತ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಮಹಾಬಲೇಶ್ವರ ಎಂ. ಎಸ್. ಅವರು ಬ್ಯಾಂಕಿನ ಪರವಾಗಿ ಸಮ್ಮಾನ ಸ್ವೀಕರಿಸಿದರು.
ಕರ್ಣಾಟಕ ಬ್ಯಾಂಕಿಗೆ ಕನ್ನಡ ಸಾಹಿತ್ಯ ಪರಿಷತ್ನಿಂದ ಸಂದ ಗೌರವಕ್ಕೆ ಆಭಾರಮನ್ನಣೆ ಸಲ್ಲಿಸಿ ಸಂತಸ ವ್ಯಕ್ತ ಪಡಿಸಿದ ಮಹಾಬಲೇಶ್ವರ ಎಂ. ಎಸ್. ಅವರು ೧೯೧೫ ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ ಹಾಗೂ ೧೯೨೪ ರಲ್ಲಿ ಆರಂಭವಾದ ಕರ್ಣಾಟಕ ಬ್ಯಾಂಕ್ ಇವೆರಡೂ ಕರ್ನಾಟಕದ ಹೆಮ್ಮೆ. ಕರ್ನಾಟಕ ಏಕೀಕರಣ ಚಳುವಳಿಯು ಭಾರತದ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಹುಟ್ಟಿ, ಸ್ವದೇಶೀ ಆಂದೋಲನದ
ರೀತಿಯಲ್ಲೇ ನವಭಾರತದ ನಿರ್ಮಾಣದಲ್ಲಿ ಅಸಾಧಾರಣ ಪಾತ್ರ ವಹಿಸಿದೆ ಎನ್ನುವುದು ಈ ಸಂದರ್ಭದಲ್ಲಿ ಗಮನಾರ್ಹ.
ಕನ್ನಡ ನಾಡು-ನುಡಿಯ ಅಭಿವೃದ್ಧಿಯಲ್ಲಿ ಕರ್ಣಾಟಕ ಬ್ಯಾಂಕ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತೊಡಗಿಸಿಕೊಂಡ ರೀತಿಯು ಅನನ್ಯ ಹಾಗೂ ಐತಿಹಾಸಿಕ. ಶತಮಾನವನ್ನು ಪೂರೈಸಿದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥೆ, ಶತಮಾನದ ಹೊಸಿಲಿನಲ್ಲಿರುವ ಕರ್ಣಾಟಕ ಬ್ಯಾಂಕಿನ ಶತಮಾನದ
ಸಾಧನೆಯನ್ನು ಗುರುತಿಸಿ, ಹಾವೇರಿಯಲ್ಲಿ ಇಂದು ನಡೆದ ೮೬ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಿರುವುದು ಒಂದು ಐತಿಹಾಸಿಕ ಘಟನೆ. ಇದಕ್ಕಾಗಿ ಕರ್ಣಾಟಕ ಬ್ಯಾಂಕಿನ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ ಎಂದು ನುಡಿದರು.