ಮಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಶಿಕ್ಷಣ ಮಂಡಳಿ, ಭಾರತ ಸರಕಾರದ ಉನ್ನತ ಶಿಕ್ಷಣ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯಗಳು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಸೆಪ್ಟೆಂಬರ್ 8 ರಿಂದ 13 ರವರೆಗೆ ಮಂಗಳೂರು ವಿವಿಯಲ್ಲಿ ಆರು ದಿನಗಳ ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮ (ಎಫ್ಡಿಪಿ) ಆಯೋಜಿಸಿದ್ದವು.
ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಮಂಗಳೂರು ವಿವಿಯ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಪ್ರಾಧ್ಯಾಪಕರು ಗ್ರಾಮೀಣ ಭಾರತದ ಪರಿಚಯ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ, ಎಂದರು. ಇದೇ ವೇಳೆ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಗ್ರಾಮ ಮತ್ತು ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಯೋಜನೆಯ ಮಾಹಿತಿ ನೀಡಿ, ಈ ನಿಟ್ಟಿನಲ್ಲಿ ಮುಂದಿರುವ ಜವಾಬ್ದಾರಿಗಳನ್ನು ವಿವರಿಸಿದರು.
ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮದ ಪ್ರಮುಖ ಭಾಗವಾಗಿ ಪ್ರಧ್ಯಾಪಕರ ಸಾಮುದಾಯಿಕ ಪಾಲ್ಗೊಳ್ಳುವಿಕೆ ಕುರಿತಂತೆ ವಿವಿಧ ಸೆಷನ್ಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುಮಾರು 25 ಮಂದಿ ಬಾಳೆಪುಣಿ ಗ್ರಾಮದ ನವಗ್ರಾಮದ ಹಳ್ಳಿಗೆ ಭೇಟಿ ನೀಡಿದರು. ಕೊಂಪದವು ನಲ್ಲಿರುವ ಕುಡುಬಿ ಸಮುದಾಯದ ಜನರೊಂದಿಗೆ ಮಾತನಾಡಿ ಸಮೀಕ್ಷೆ ನಡೆಸಿ ಯೋಜನಾ ವರದಿಯನ್ನು ಪ್ರಾಯೋಗಿಕವಾಗಿ ತಯಾರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ ಕೆ ಸಮಾರೋಪ ಭಾಷಣ ಮಾಡಿ ಭಾಗವಹಿಸಿದವರಿಗೆ ಪ್ರಮಾಣಪತ್ರ ವಿತರಿಸಿದರು. ಎಂಜಿಎನ್ಸಿಆರ್ಇ ಶೈಕ್ಷಣಿಕ ಸಲಹೆಗಾರ ಪ್ರೊ. ಚೇತನ್ ಚಿತ್ತಾಲ್ಕರ್, ಬೆಸೆಂಟ್ ಸಂಸ್ಥೆಗಳ ನಿವೃತ್ತ ಪ್ರಾಂಶುಪಾಲ ಪ್ರೊ ನಾರಾಯಣ್, ಮಂಗಳೂರು ವಿವಿಯ ವಿಶೇಷಾಧಿಕಾರಿ (ಕುಸಚಿವರ ವಿಭಾಗ) ಡಾ. ಯಶಸ್ವಿನಿ ಬಟ್ಟಂಗಾಯ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.