ಮಂಗಳೂರು: ಜಿಲ್ಲಾ ಗೃಹರಕ್ಷಕ ದಳಕ್ಕೆ ಹೊಸದಾಗಿ ನೊಂದಾಯಿತರಾದ ಗೃಹರಕ್ಷಕರಿಗೆ ಏ.10 ರಿಂದ 19 ರವರೆಗೆ ನಡೆಯುವ ವಾರ್ಷಿಕ ಮೂಲ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಏ.10ರಂದು ನಂತೂರು ಭಾರತಿ ಕಾಲೇಜಿನಲ್ಲಿ ನಡೆಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ವಿಕ್ರಮ್ ಅಮಟೆ ತರಬೇತಿ ಶಿಬಿರ ಉದ್ಘಾಟನೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು ಸಮವಸ್ತ್ರ ಧರಿಸಿದ ನಂತರ ಶಿಸ್ತಿನಿಂದ ಇಲಾಖೆಯ ನಿಯಮದಂತೆ ಕರ್ತವ್ಯ ನಿರ್ವಹಿಸಬೇಕು, ಗೃಹರಕ್ಷಕರು ಪೊಲೀಸರಂತೆ ಸಮವಸ್ತ್ರ ಧರಿಸಿ ಯಾವುದೇ ಸಮಯದಲ್ಲಿ ಎಲ್ಲಾ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಇಲ್ಲಿ ನೀಡುವ ಎಲ್ಲಾ ರೀತಿಯ ತರಬೇತಿಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಸಮಾಜಕೋಸ್ಕರ ನಿಮ್ಮನ್ನು ನೀವು ಸಮರ್ಪಿಸಬೇಕು. ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ, ಸಿಕ್ಕಿರುವ ಅವಕಾಶವನ್ನು ಉತ್ತಮವಾಗಿ ಬಳಸಕೊಳ್ಳಿ ಮತ್ತು ಸಮಾಜಕ್ಕೆ ಸಮರ್ಪಿಸಿಕೊಳ್ಳಿ ಎಂದು ನುಡಿದರು.
ಈ ಸಮಾರಂಭದ ಅಧ್ಯಕ್ಷ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಮಾತನಾಡಿ ಈ ಹತ್ತು ದಿನದ ತರಬೇತಿಯಲ್ಲಿ ಲಾಠಿ ಡ್ರಿಲ್, ಮಾಚ್ ಫಾಸ್ಟ್, ಫೈರ್ ಫೈಟಿಂಗ್, ವೈರ್ಲೆಸ್ ತರಬೇತಿ ಮುಂತಾದ ತರಬೇತಿ ನೀಡಲಿದ್ದಾರೆ.
ಹತ್ತು ದಿನಗಳಲ್ಲಿ ಎಲ್ಲವನ್ನು ಕಲಿಯಲು ಸಾಧ್ಯವಿಲ್ಲ. ಆದರೆ ಒಂದಷ್ಟು ವಿಚಾರಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಇರಬೇಕು, ಮಾಹಿತಿ ಇದ್ದರೆ ನಿಮಗೆ ಮುಂಬರುವ ದುರಂತಗಳನ್ನು ತಪ್ಪಿಸಲು ಅಥವಾ ಮುಂಬರುವಂತ ದುರಂತಗಳಿಂದ ಆಗುವಂತ ತೊಂದರೆಗಳನ್ನು ನಿಭಾಯಿಸಲು ಸಾಧ್ಯವಿದೆ. ಗೃಹರಕ್ಷಕರು ಒಂದು ರೀತಿಯಲ್ಲಿ ಸೈನಿಕರಿದ್ದಂತೆ, ಗಡಿಯಲ್ಲಿ ಸೈನಿಕರು ಹೇಗೆ ದೇಶವನ್ನು ಕಾಯುತ್ತಾರೋ ಹಾಗೆಯೇ ಗೃಹರಕ್ಷಕರು ದೇಶದೊಳಗಿನ ಸೈನಿಕರು ಎಂದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಮಂಗಳೂರು ನಗರದ ಚೀಫ್ಟ್ರಾಫಿಕ್ ವಾರ್ಡನ್ ಸುರೇಶ್ನಾಥ್ , ಗೃಹರಕ್ಷಕರು ಆಲ್ರೌಂಡರ್ ಇದ್ದಂತೆ. ಗೃಹರಕ್ಷಕರಿಗೆ 10 ದಿನಗಳ ಮೂಲ ತರಬೇತಿ ನೀಡುವುದು ಅತೀ ಅವಶ್ಯಕ. ನಿಮ್ಮನ್ನು ನೀವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಹಾಗೂ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ, ಸಮಾಜದ ಆಸ್ತಿಗಳನ್ನು ಹಾನಿ ಆಗದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟ ರಮೇಶ್ ಸ್ವಾಗತಿಸಿದರು. ಮಂಗಳೂರು ಘಟಕದ ಗೃಹರಕ್ಷಕ ಕನಕಪ್ಪ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಕಚೇರಿ ಅಧೀಕ್ಷಕಿ ಕವಿತಾ ಕೆ.ಸಿ, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ಹಿರಿಯ ಗೃಹರಕ್ಷಕರಾದ ಸುನಿಲ್ ಕುಮಾರ್, ಸುನಿಲ್, ರೇವತಿ ದಿನೇಶ್, ದಿವಾಕರ್ ಹಾಗೂ 30 ಮಂದಿ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.