ಮಂಗಳೂರು, ಜ.5: ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್ ಇದ್ದಂತೆ. ಅವರು ಬಾಲಿಶವಾಗಿ, ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ಅವರು ಒಂದು ರೀತಿ ಬಿಜೆಪಿ ಪಕ್ಷದ ವಿದೂಷಕರಿದ್ದಂತೆ. ಹಾಗಾಗಿ ಅವರ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ವಿಧಾನಸಭೆಯ ಚುನಾವಣೆ ಮೊದಲು ಸಿದ್ದರಾಮಯ್ಯನವರನ್ನು ಜೈಲಿಗೆ ಕಲಿಸುತ್ತೇವೆ ಎಂದ ನಳಿನ್ ಹೇಳಿಕೆಗೆ ಪ್ರತಿಕ್ರಿಯಿಸಿ, ವಿಚಾರಣೆ ಮಾಡಿ ತಪ್ಪಿತಸ್ಥರಾದಲ್ಲಿ ಜೈಲಿಗೆ ಕಲಿಸುವುದು ಕೋರ್ಟ್, ಇವರಲ್ಲ. ಅದಕ್ಕೆ ಅವರು ಪೆದ್ದುಪೆದ್ದಾಗಿ ಮಾತನಾಡೋದು, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಾರೆ. ಕಾನೂನು ಗೊತ್ತಿಲ್ಲದಂತೆ ಮಾತನಾಡುವವರ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದರು.
ನಾನು ಸಿಎಂ ಅವರನ್ನು ನಾಯಿ ಮರಿ ಅಂದಿಲ್ಲ. ಯಾವತ್ತೂ ಧೈರ್ಯ ಇರಬೇಕು. ರಾಜ್ಯದ ಹಿತ ಮುಖ್ಯವಾಗಿದೆ. ಧೈರ್ಯವಾಗಿ ಕೇಂದ್ರದೊಂದಿಗೆ ಮಾತನಾಡಿ ರಾಜ್ಯಕ್ಕೆ ಹಣ ತರಬೇಕು. ಕೇಂದ್ರದಿಂದ ಬರುವ ಅನುದಾನಗಳು ಕಡಿಮೆಯಾಗಿದೆ. ಆದ್ದರಿಂದ ಇವರು ಧೈರ್ಯವಾಗಿರಬೇಕು. ನಾಯಿಮರಿಯಂತೆ ಇರಬಾರದೆಂದು ಹೇಳಿದ್ದೆ ಅಷ್ಟೇ. ಇದರಲ್ಲಿ ತಪ್ಪೇನಿದೆ?, ಇದು ಅಸಾಂವಿಧಾನಿಕವೇ? ಎಂದು ಪ್ರಶ್ನಿಸಿದ್ದಾರೆ.