ಮಂಗಳೂರು: ಸಿಕ್ಕ ಅಲ್ಪಾವಧಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೂಲಸೌಕರ್ಯ ಒದಗಿಸುವ ಕೆಲಸ ಮಾಡಿದ್ದೇನೆ. ಈ ಬಗ್ಗೆ ಸಮಾಧಾನವಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಭರತ್ ಶೆಟ್ಟಿ ಹೇಳಿದರು.
ಬುಧವಾರ ಮನೆ, ಮನೆ ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿ, ಪ್ರಕೃತಿ ವಿಕೋಪ, ಕೋವಿಡ್ ಕಾರಣದಿಂದ 2 ವರ್ಷಗಳ ಅಲ್ಪಾವಧಿ ದೊರಕಿತ್ತು. ಆದರೂ ಹಿಂದಿನ ಚುನಾವಣೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇನೆ. ಕುಡಿಯುವ ನೀರು, ರಸ್ತೆ, ಆರೋಗ್ಯ ಸೇವೆ ಒದಗಿಸಿದ್ದೇನೆ ಎಂದರು.
ಕ್ಷೇತ್ರದ 8 ಕಡೆ ಜನಸ್ಪಂದನ ಕಾರ್ಯಕ್ರಮ ನಡೆಸಲಾಗಿದ್ದು, ಜನರಿಗೆ ಒಂದೇ ಸೂರಿನಡಿ ಎಲ್ಲ ಸರ್ಕಾರಿ ಸೇವೆ ಒದಗಿಸುವ ಪ್ರಯತ್ನ ಮಾಡಲಾಗಿದೆ ಎಂದರು. ನಾಯರ್ಕುದ್ರು, ತಣ್ಣೀರು ಬಾವಿ, ಪಣಂಬೂರು ಬೀಚ್ ಅಭಿವೃದ್ಧಿ ಹೊಂದುತ್ತಿವೆ. ಮುಂದಿನ ದಿನಗಳಲ್ಲಿ ಇವು ಪ್ರವಾಸೋದ್ಯಮದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.
ಉದ್ಯೋಗ ಸೃಷ್ಟಿ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಕುಳಾಯಿಯಲ್ಲಿ ಸರ್ವ ಋತು ಬಂದರು ಜೆಟ್ಟಿ ನಿರ್ಮಾಣ, ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಯಂತಹ ಹಲವು ಯೋಜನೆಗಳು ಕೈಗೂಡಿದಲ್ಲಿ ಈ ಭಾಗದ ಜನರಿಗೆ ಸುಲಭದಲ್ಲಿ ಉದ್ಯೋಗ ದೊರೆಯಲಿದೆ ಎಂದರು. ಕಳೆದ ಬಾರಿ 26 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರೆ ಈ ಬಾರಿ 50-55 ಸಾವಿರ ಮತಗಳಿಗೆ ವಿಸ್ತರಿಸಲಿದೆ ಎಂದರು.