ಮಂಗಳೂರು: ಫಾದರ್ ಮುಲ್ಲರ್ ಕಾಲೇಜು ವಾಕ್- ಶ್ರವಣ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಶ್ರವಣ ನ್ಯೂನ್ಯತೆಯುಳ್ಳವರ ವಾರದ ಅಂಗವಾಗಿ ಕೇಂದ್ರ ಸರಕಾರದ ಎಡಿಐಪಿ ಯೋಜನೆಯಡಿ ಉಚಿತ ಶ್ರವಣ ಸಾಧನಗಳ ವಿತರಣೆ ಶಿಬಿರ ಸೆ. ೨೬ರಿಂದ ೨೮ರವರೆಗೆ ಆಯೋಜಿಸಲಾಗಿದೆ ಎಂದು ಫಾದರ್ ಮುಲ್ಲರ್ ಕಾಲೇಜಿನ ಪ್ರೊ. ಅಖಿಲೇಶ್ ಪಿಎಂ ತಿಳಿಸಿದ್ದಾರೆ.
ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಸರಕಾರಿ ಆಸ್ಪತ್ರೆಗಳ ಮೂಲಕ ಕೇಂದ್ರ ಸರಕಾರದ ಯೋಜನೆಯಡಿ ಶ್ರವಣ ಸಾಧನಗಳ ವಿತರಣೆ ಈಗಾಗಲೇ ನಡೆಯುತ್ತಿದ್ದು, ಖಾಸಗಿ ಆಸ್ಪತ್ರೆಗಳ ಮೂಲಕ ಉಚಿತವಾಗಿ ಅರ್ಹರಿಗೆ ಶ್ರವಣ ಸಾಧನ ಸಲಕರಣೆಗಳನ್ನು ವಿತರಿಸುವ ಅವಕಾಶ ಫಾದರ್ ಮುಲ್ಲರ್ ಸಂಸ್ಥೆಗೆ ಲಭಿಸಿದೆ. ಈಗಾಗಲೇ ೧೫೦ ಸಾಧನಗಳು ಬಂದಿರುವುದಾಗಿ ಹೇಳಿದರು.
ಶಿಬಿರದಲ್ಲಿ ಶೇ. ೪೦ಕ್ಕಿಂದ ಅಧಿಕ ಶ್ರವಣ ದೋಷವುಳ್ಳ ಬಿಪಿಎಲ್ ಕಾರ್ಡುದಾರರಿಗೆ ಈ ಉಚಿ ಸಲಕರಣೆ ತಪಾಸಣೆಯ ಬಳಿಕ ನೀಡಲಾಗುವುದು. ಕಳೆದ ಮೂರು ವರ್ಷಗಳಲ್ಲಿ ಸರಕಾರದಿಂದ ನೆರವು ಅಥವಾ ಈ ಸೌಲಭ್ಯವನ್ನು ಉಚಿತವಾಗಿ ಪಡೆದಿರದವರಿಗೆ ಶಿಬಿರದಲ್ಲಿ ಸ್ಥಳದಲ್ಲೇ ವಿತರಿಸಲಾಗುವುದು. ಸೆ. ೨೬ರಂದು ಬೆಳಗ್ಗೆ ೧೦ ಗಂಟೆಗೆ ಶಿಬಿರ ಉದ್ಘಾಟನೆಗೊಳ್ಳಲಿದ್ದು, ಶಾಸಕ ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮುಂಬೈ ಐಜ್ನಿಹ್ ನಿರ್ದೇಶಕ ಡಾ. ಅರುಣ್ ಬಾಂಕ್ ಗೌರವ ಅಥಿತಿಯಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಬಳಿಕ ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಮಾತನಾಡಿ, ಉಚಿತ ಶ್ರವಣ ಸಾಧನ ವಿತರಣಾ ಶಿಬಿರದ ಜತೆಯಲ್ಲಿ ಹಿರಿಯರಿಗೆ ಉಚಿತ ಶ್ರವಣ ಪರೀಕ್ಷೆ, ಶ್ರವಣ ಸಾಧನಗಳ ಉಚಿತ ಪ್ರಯೋಗ, ಸಬ್ಸಿಡಿ ದರದಲ್ಲಿ ಶ್ರವಣ ಸಾಧನಗಳ ವಿತರಣೆಯೂ ನಡೆಯಲಿದೆ, ೨೪ರಂದು ಸ್ಕಿಲ್ ಎಜುಕಾನ್ ೨೦೨೦ ಉದ್ಘಾಟನೆ ಫಾದರ್ ಮುಲ್ಲರ್ ಮೆಡಿಕಲ್ ಎಜುಕೇಶನ್ ಘಟಕ ಮತ್ತು ಫಾದರ್ ಮುಲ್ಲರ್ ಸಿಮ್ಯುಲೇಶನ್ ಆ್ಯಂಡ್ ಸ್ಕಿಲ್ ಸೆಂಟರ್ ವತಿಯಿಂದ ಸೆ. ೨೪ರಂದು ಸ್ಕಿಲ್ ಎಜುಕಾನ್ ೨೦೨೨ ಕಾರ್ಯಾಗಾರವು ನಡೆಯಲಿದೆ ಎಂದವರು ಹೇಳಿದರು.
ಈ ವೇಳೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿಗಳಾದ .ಫಾ. ನೆಲ್ಸನ್ ಧೀರಜ್ ಪಾಯಸ್, .ಫಾ. ಜಾರ್ಜ್ ಜೀವನ್ ಸಿಕ್ವೇರಾ, ವೈದ್ಯಕೀಯ ಅಧೀಕ್ಷರಾದ ಡಾ. ಉದಯ ಕುಮಾರ್ ಕೆ. ಮತ್ತಿತರರು ಉಪಸ್ಥಿತರಿದ್ದರು.