ಸುರತ್ಕಲ್: ಕುಳಾಯಿ ಗ್ರಾಮದ ಮನೆಯೊಂದರಲ್ಲಿ ಮಾರ್ಚ್ 26ರ ಸಂಜೆ ಗಾಂಜಾ ಮಾರಾಟ ಮತ್ತು ಸೇವನೆ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಿಕ್ರಂ ಅಲಿಯಾಸ್ ಜಯರಾಂ(30) ಬೈಕಂಪಾಡಿ ನಿವಾಸಿಯಾಗಿದ್ದು, ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದವರು ಸತೀಶ್ (50) ಕೋಡಿಯಾಲ್ ಬೈಲ್, ಸರ್ಫರಾಜ್ (37) ಹೊನ್ನಕಟ್ಟೆ, ಅಕ್ಷಯ್ (33)ಬೈಕಂಪಾಡಿ ನಿವಾಸಿಗಳಾಗಿದ್ದಾರೆ.
ಯುವಕರು ಸೇರಿಕೊಂಡು ಮಾದಕ ವಸ್ತು ಗಾಂಜಾವನ್ನು ಮಾರಾಟ ಮತ್ತು ಸೇದುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಉತ್ತರ ಪೊಲೀಸ್ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯಕ್ ರವರ ಆದೇಶದ ಮೇರೆಗೆ ಸುರತ್ಕಲ್ ಠಾಣಾ ಇನ್ಸೆಕ್ಟರ್ ಮಹೇಶ್ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ಪಿಎಸ್ ಐ ಪ್ರದೀಪ್ ಟಿ.ಆರ್. ಮತ್ತು ಸಿಬಂದಿಗಳಾದ ಅಣ್ಣಪ್ಪ, ಅಜೀತ್ ಮ್ಯಾಥ್ಯ, ದಿಲೀಪ್, ಕಾರ್ತಿಕ್ ರವರ ತಂಡ ಸದರಿ ಸ್ಥಳಕ್ಕೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ನಾಲ್ವರು ರೂಮ್ ನಲ್ಲಿ ಗಾಂಜಾವನ್ನು ಸಿಗರೇಟ್ ಮಾದರಿಯಲ್ಲಿ ಸೇದುತ್ತಿರುವುದು ಕಂಡು ಬಂದಿದ್ದು, ಗಾಂಜಾ ತುಂಬಿದ ಪಾಕೆಟ್ ಗಳು ದೊರೆತ್ತಿದ್ದು, ಆಟೋರಿಕ್ಷಾದಲ್ಲಿ 790 ಗ್ರಾಂ ಗಾಂಜಾ ಮತ್ತು ತೂಕದ ಮಾಪನ ಮತ್ತು ಗಾಂಜಾ ಪ್ಯಾಕ್ ಮಾಡುವ ಖಾಲಿ ಪ್ಯಾಕೆಟ್ ಗಳು ದೊರೆತ್ತಿರುತ್ತವೆ. 4 ಮೊಬೈಲ್ ಪೋನ್, 2470ರೂ. ನಗದು ಹಣ, ಆಟೋರಿಕ್ಷಾ ವಶ ಪಡಿಸಿಕೊಳ್ಳಲಾಗಿದೆ. ಸುರತ್ಕಲ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ.