ಮಂಗಳೂರು: ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮತ್ತೆ ಮಂಗಳೂರಿಗೆ ಆಗಮಿಸಿದ್ದಾರೆ . ಮಂಗಳೂರಿನಲ್ಲೇ ಅತಿ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲ್ಪಟ್ಟಿರುವ ಸುರತ್ಕಲ್ ಪೇಟೆ ಮತ್ತು ಕಾಟಿಪಳ್ಳ ಪ್ರದೇಶಗಳಿಗೆ ತೆರಳಿ ಅಲ್ಲಿ ಸಾರ್ವಜನಿಕರನ್ನು ಮಾತನಾಡಿಸಿದ್ದಾರೆ.
ಅಂಗಡಿಗಳು ವ್ಯಾಪಾರ ಸಂಕೀರ್ಣ ಗಳಿಗೂ ತೆರಳಿ ಸಾಮಾನ್ಯ ಜನರ ಜೊತೆ ಸಂವಹನ ನಡೆಸಿದ್ದಾರೆ. ಅಲ್ಲದೆ ಅಲ್ಲೇ ನಿಯೋಜನಗೊಂಡ ಪೊಲೀಸರ ಜತೆಗೂ ಮಾತುಕತೆ ನಡೆಸಿದ್ದಾರೆ. ಪೊಲೀಸರನ್ನು ಅಲರ್ಟ್ ಇರುವಂತೆ ಸೂಚನೆ ನೀಡಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144ಸೆಕ್ಷನ್ ಜಾರಿಗೊಳಿಸಿದ್ದರೂ ಅಹಿತಕರ ಘಟನೆಗಳಿಗೆ ಪ್ರಯತ್ನ ನಡೆಯುತ್ತಿದೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಒಂದೇ ವಾರದಲ್ಲಿ ಎರಡನೇ ಬಾರಿಗೆ ಎಡಿಜಿಪಿ ಭೇಟಿ ನೀಡಿದ್ದಾರೆ.
ಇದಲ್ಲದೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೂ ಪೊಲೀಸರನ್ನು ಅಲರ್ಟ್ ಇರುವಂತೆಯೇ ಡಿಜಿಪಿ ಸೂಚನೆ ಸೂಚನೆ ನೀಡಿದ್ದಾರೆ . ಮಂಗಳೂರಿಗೆ ಕಮಿಷನರ್ ಕಚೇರಿಯಲ್ಲಿ 2ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಎಡಿಜಿಪಿ ಸಭೆ ನಡೆಸಿದ್ದು ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.
ಪ್ರವೀಣ್ ನೆಟ್ಟಾರು ಮತ್ತು ಫಾಜಿಲ್ ಕೊಲೆ ಪ್ರಕರಣದ ಬಗ್ಗೆಯೂ ತನಿಖಾಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಇದರ ನಡುವೆ ಎಡಿಜಿಪಿ ಅಲೋಕ್ ಕುಮಾರ್ ಬೆಳಿಗ್ಗೆ ದಿಢೀರ್ ಆಗಿ ಮಂಗಳೂರು ಜೈಲಿಗೂ ಭೇಟಿನೀಡಿ ಅಚ್ಚರಿ ಮೂಡಿಸಿದ್ದಾರೆ. ಎರಡೂ ಪ್ರಕರಣದ ಆರೋಪಿಗಳನ್ನು ಮಂಗಳೂರಿನ ಜೈಲಿನಲ್ಲಿ ಇರಿಸಲಾಗಿದ್ದು ಅವರ ಬಗ್ಗೆ ನಿಗಾ ಇರಿಸುವಂತೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.