News Karnataka Kannada
Tuesday, May 07 2024
ಮಂಗಳೂರು

ಮಂಗಳೂರು: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಚೆ ಇಲಾಖೆಯಿಂದ ಹೊಸ ಯೋಜನೆ ‘ಪ್ರೊಜೆಕ್ಟ್ ಮಂಗಳ’

Mangaluru: For the benefit of students, the Department of Posts has launched a new scheme 'Project Mangala'
Photo Credit : News Kannada

ಮಂಗಳೂರು: ಎಲ್ಲಾ ರೀತಿಯ ಶೈಕ್ಷಣಿಕ ದಾಖಲೆಗಳು, ಅಂತಿಮ ಸೆಮಿಸ್ಟರ್ ಅಂಕಪಟ್ಟಿಗಳು, ಡಿಗ್ರಿ/ಡಿಪ್ಲೋಮಾ ಸರ್ಟಿಫಿಕೇಟುಗಳನ್ನು ಸ್ಪೀಡ್ ಪೋಸ್ಟ್ ಮೂಲಕ ವಿದ್ಯಾರ್ಥಿಗಳ ಮನೆಬಾಗಿಲಿಗೆ ತಲುಪಿಸುವ ಅಂಚೆ ಇಲಾಖೆಯ ನೂತನ ಯೋಜನೆ “ಪ್ರಾಜೆಕ್ಟ್ ಮಂಗಳ” ಇಂದು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು(KPT)ನಲ್ಲಿ ಶುಭಾರಂಭಗೊಂಡಿತು. ಈ ಉಪಕ್ರಮದೊಂದಿಗೆ, ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಡಿಪ್ಲೋಮಾ ಕಾಲೇಜುಗಳ ಶೈಕ್ಷಣಿಕ ದಾಖಲೆಗಳು , ಅಂಕ ಪಟ್ಟಿಗಳು ,ಪ್ರಮಾಣಪತ್ರಗಳನ್ನು ಸ್ಫೀಡ್ ಪೋಸ್ಟ್ ಸೇವೆಯ ಮೂಲಕ ವಿದ್ಯಾರ್ಥಿಗಳ ಮನೆಬಾಗಿಲಿಗೆ ತಲುಪಿಸುವ ಸೇವೆಗೆ ಚಾಲನೆ ನೀಡಲಾಗಿದೆ .

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀ ಗಿರೀಶ್ ಬಾಬುರವರು ಹಾಗೂ ಭಾರತೀಯ ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕರಾದ  ಶ್ರೀಹರ್ಷರವರು ‘ಪ್ರಾಜೆಕ್ಟ್ ಮಂಗಳ’ ಲೋಗೊ ವಿನ ಅನಾವರಣಗೊಳಿಸಿದರು.

ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಡಿಪ್ಲೋಮಾ ಕಾಲೇಜಿನ ಅಂಕ ಪಟ್ಟಿಗಳು, ಡಿಪ್ಲೋಮಾ ಡಿಗ್ರಿ ಸರ್ಟಿಫಿಕೇಟ್ ಗಳು ಇನ್ಮುಂದೆ ಸ್ಪೀಡ್ ಪೋಸ್ಟ್ ಮೂಲಕ ಮನೆಬಾಗಿಲಿಗೆ ತಲುಪಲಿದೆ. ಈ ಬಗೆಗಿನ ಒಪ್ಪಂದಕ್ಕೆ ಇಂದು ಕೆ‌ಪಿ‌ಟಿಯಲ್ಲಿ ಮಂಗಳೂರು ಹಿರಿಯ ಅಂಚೆ ಅಧೀಕ್ಷಕರಾದ  ಶ್ರೀಹರ್ಷರವರು ಕೆ‌ಪಿ‌ಟಿ ಯ ಪ್ರಭಾರ ಪ್ರಾಂಶುಪಾಲರಾದ ಶ್ರೀ ಗಿರೀಶ್ ಬಾಬುರವರಿಗೆ ಒಡಂಬಡಿಕೆ ಪತ್ರವನ್ನು ಹಸ್ತಾಂತರಿಸಿದರು.

ಅಂಚೆ ಇಲಾಖೆ ಈಗಾಗಲೇ ವಿವಿಧ ಸರ್ಕಾರಿ ದಾಖಲೆಗಳು, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಪಾನ್ ಕಾರ್ಡ್, ಡೆಬಿಟ್ ಕಾರ್ಡ್, ಎಟಿಎಂ ಕಾರ್ಡ್, ಚೆಕ್ ಬುಕ್ ಮುಂತಾದ ಲಕ್ಷಾಂತರ ದಾಖಲೆಗಳನ್ನು ಹಲವು ವರ್ಷಗಳಿಂದ ಪ್ರತಿದಿನ ಜನರ ಮನೆಬಾಗಿಲಿಗೆ ತಲುಪಿಸುತ್ತಿದ್ದು, ಈಗ ಎಲ್ಲಾ ಬಗೆಯ ಶೈಕ್ಷಣಿಕ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮನೆಬಾಗಿಲಿಗೆ ತಲುಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ಅಂಚೆ ವಿಭಾಗ ಮೊದಲ ಹೆಜ್ಜೆ ಇಟ್ಟಿದೆ.

ಪ್ರಸ್ತುತ ಪಿಯುಸಿ ಸೇರಿದಂತೆ, ಪದವಿ, ಉನ್ನತ ಪದವಿಗಳ ಅಂತಿಮ ಸೆಮಿಸ್ಟರ್ ಹಾಗೂ ಪದವಿಯ /ಉನ್ನತ ಪದವಿಯ ಸರ್ಟಿಫಿಕೇಟ್ ಗಳು ವಿದ್ಯಾರ್ಥಿಗಳು ಕಾಲೇಜು ಮುಗಿಸಿದ ಕೆಲತಿಂಗಳುಗಳ ನಂತರ ಮುದ್ರಣಗೊಂಡು ಕಾಲೇಜುಗಳಿಗೆ ರವಾನಿಸಲ್ಪಡುವುದರಿಂದ ವಿದ್ಯಾರ್ಥಿಗಳು ದೂರದ ಸ್ಥಳದಿಂದ ಇದನ್ನು ಪಡೆದುಕೊಳ್ಳುವುದಕ್ಕಾಗಿಯೇ ಕಾಲೇಜು, ಕೆಲಸಕ್ಕೆ ರಜೆ ಹಾಕಿ ಬರಬೇಕಾದ ಅನಿರ್ವಾಯತೆಯಿದೆ. ಆದ್ದರಿಂದ ಈ ವ್ಯವಸ್ಥೆಯಲ್ಲಿ ದೂರದ ಸ್ಥಳಗಳಿಂದ ಬರುವ ವಿದ್ಯಾರ್ಥಿಗಳು ಪ್ರಮಾಣ ಪತ್ರಗಳನ್ನು ಪಡೆಯಲು ಸಮಯ ಹಾಗೂ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ.

ವಿದ್ಯಾರ್ಥಿಗಳ ಈ ಅನಾನುಕೂಲತೆಯನ್ನು ನಿವಾರಿಸಲು, ಅಂಚೆ ಇಲಾಖೆಯ ಈ ಹೊಸ ಯೋಜನೆ ಸಹಕಾರಿಯಾಗಲಿದೆ.

ಈ ಸೇವೆಯ ವಿಶೇಷತೆಗಳು :
 ಈ ಪ್ರಮಾಣ ಪತ್ರ/ಅಂಕ ಪಟ್ಟಿಗಳನ್ನು ಭಾರತದ ಯಾವುದೇ ಊರಿಗೂ ಸ್ಫೀಡ್ ಪೋಸ್ಟ್ ಸೇವೆಯ ಮೂಲಕ ತಲುಪಿಸಬಹುದು.
 ಬಟವಾಡೆಯಾಗಬೇಕಾಗಿರುವ ವಿಳಾಸವು ಕಾಲೇಜಿನ ಅರ್ಜಿಯಲ್ಲಿ ನಮೂದಿಸಲಾದ ವಿಳಾಸಕ್ಕಿಂತ ಬೇರೆ ಕೂಡಾ ಆಗಿರಬಹುದು. ವಿದ್ಯಾರ್ಥಿಗಳು ಪ್ರಮಾಣ ಪತ್ರವನ್ನು ಮನೆಯ ವಿಳಾಸದಲ್ಲಿ ಅಥವಾ ಕಛೇರಿಯ ವಿಳಾಸದಲ್ಲೂ ಪಡೆಯಬಹುದು.
 ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರು ಬಟವಾಡೆ ಪಡೆದುಕೊಳ್ಳಬಹುದು.
 ಈ ಸರ್ಟಿಫಿಕೇಟ್/ಅಂಕಪಟ್ಟಿಯನ್ನು 2 ರಿಂದ 5 ದಿನಗಳ ಒಳಗಾಗಿ ಸ್ಪೀಡ್ ಪೋಸ್ಟ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸಲಾಗುವುದು.
 ರವಾನೆಯಿಂದ ಬಟವಾಡೆವರೆಗೆ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ SMS ಮೂಲಕ ಮಾಹಿತಿ ನೀಡಲಾಗುವುದು.
 ಪ್ರಮಾಣ ಪತ್ರವನ್ನು ಒಳಗೊಂಡ ಸ್ಪೀಡ್ ಪೋಸ್ಟ್ ಬಟವಾಡೆಯ ಯಾವ ಹಂತದಲ್ಲಿದೆ ಎಂದು www.indiapost.gov.in ನಲ್ಲಿ ಟ್ರ್ಯಾಕ್ ಮಾಡಿ ನೋಡಬಹುದು.

ಅಂಚೆ ಇಲಾಖೆಯು ಈಗಾಗಲೇ ಮಂಗಳೂರಿನ ಇತರ ಎಲ್ಲಾ ಪಿಯುಸಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ಬಗೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಸ್ಥೆಗಳಿಂದ ಧನಾತ್ಮಕ ಉತ್ತರ ಬರುವ ನಿರೀಕ್ಷೆಯಿದೆ. ಮಂಗಳೂರಿನಲ್ಲಿ ಶಿಕ್ಷಣ ಪಡೆದು ಮರಳುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ಸೇವೆ ವರದಾನವಾಗಲಿದೆ.

ಕೆ‌ಪಿ‌ಟಿ ಕಾಲೇಜಿನ ರಿಜಿಸ್ಟ್ರಾರ್ ರಾದ ಗುರುಬಸವರಾಜು, ಮಂಗಳೂರಿನ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀನಾಥ್ ಎನ್.ಬಿ ಹಾಗೂ ಮಂಗಳೂರಿನ ಉತ್ತರ ಉಪವಿಭಾಗದ ಅಂಚೆ ನಿರೀಕ್ಷಕರಾದ ಮೆಲ್ವಿನ್ ಅರುಣ್ ಲೋಬೊ ರವರು ಉಪಸ್ತಿತರಿದ್ದರು. ಕೆ‌ಪಿ‌ಟಿ ಕಾಲೇಜಿನ ಅಬಜೆಕ್ಟ್ ಸಿಬ್ಬಂದಿಯಾದ ಸೂರಜ್ ಪಿ ಹೆಚ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು