ಮಂಗಳೂರು: ಉತ್ತರ ವಿಧಾನಸಭಾ ಕ್ಷೇತ್ರದ ಮನಪಾ ವಾರ್ಡ್ ಮತ್ತು ಗ್ರಾಮ ಪಂಚಾಯಿತಿಗಳಿಗೆ ಅನುದಾನದ ಅವಶ್ಯಕತೆಗೆ ತಕ್ಕಂತೆ ಸಮಾನ ನ್ಯಾಯ ನೀಡುವ ಮೂಲಕ ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಕ್ಷೇತ್ರದ ಮತದಾರರು, ಕಾರ್ಯಕರ್ತರ ನಿರೀಕ್ಷೆಯಂತೆ ಕೆಲಸ ಮಾಡಿದ ಸಂತೃಪ್ತಿಯಿದೆ ಎಂದು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಹೇಳಿದರು.
ಮಂಗಳೂರು ನಗರದ ಕದ್ರಿ ಬಿ. 22ನೇ ವಾರ್ಡ್ನಲ್ಲಿರುವ ಯೆಯ್ಯಡಿ ಶ್ರೀರಾಮ ಮಂದಿರ ಮುಂಭಾಗ ಕೆರೆ ಉದ್ಘಾಟನೆ ಹಾಗೂ ತಡೆಗೋಡೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕದ್ರಿ 22 ಬಿ ವಾರ್ಡ್ನಲ್ಲಿ ಈಗಾಗಲೇ ಬಾರೆಬೈಲು ಮುಖ್ಯರಸ್ತೆ ಕಾಂಕ್ರೀಟೀಕರಣಕ್ಕೆ 25ಲಕ್ಷ ರೂ., ಹಿಲ್ಸ್ ರಸ್ತೆ ಮತ್ತು ಒಳಚರಂಡಿಗೆ 28.50ಲಕ್ಷ ರೂ., ಶ್ರೀರಾಮಮಂದಿರ ಕೆರೆ ನಿರ್ಮಾಣಕ್ಕೆ 52ಲಕ್ಷ ರೂ., ರಸ್ತೆ ನಿರ್ಮಾಣಕ್ಕೆ 1.5ಲಕ್ಷ ರೂ., ಗುರುಬಾಹುಲೇನ್ ರಸ್ತೆ ಕಾಮಗಾರಿ 5.50ಲಕ್ಷ ರೂ., ಜಾರಂದಾಯ ದೈವಸ್ತಾನ ಕೂಡುರಸ್ತೆ ಬದಿ ತೋಡು ನಿರ್ಮಾಣ 15ಲಕ್ಷ ರೂ., ವ್ಯಾಸನಗರ ಮುಖ್ಯ ರಸ್ತೆ 40ಲಕ್ಷ ರೂ., ಒಳಚರಂಡಿ ರಚನೆ ರಚನೆ ಸೇರಿದಂತೆ ಒಟ್ಟು 22ಕೋಟಿ ರೂ. ವೆಚ್ಚದ ಕಾಮಗಾರಿ ಈ ವಾರ್ಡ್ನಲ್ಲಾಗಿದೆ. ಕ್ಷೇತ್ರದಲ್ಲಿ ಯಾವುದೇ ರಾಜಕೀಯ ನೋಡದೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದೇನೆ ಎಂದರು. ಮೇ 22ರಂದು ಯೆಯ್ಯಡಿ ನೂತನ ಶ್ರೀರಾಮಮಂದಿರದ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಅದಕ್ಕಿಂತ ಮುನ್ನ ಕೆರೆ ಸಮರ್ಪಣೆ ನಡೆದಿದೆ ಎಂದರು.
ಈ ಸಂದರ್ಭ ಮೇಯರ್ ಜಯಾನಂದ ಅಂಚನ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರು, ಮಂದಿರದ ಅಧ್ಯಕ್ಷರಾದ ಕಮಲಾಕ್ಷ ಬಂಗೇರಾ, ಮುಖಂಡರಾದ ನಾರಾಯಣ್,133 ನೇ ಬೂತಿನ ಅಧ್ಯಕ್ಷರಾದ ಉಮೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿವೇಕಾನಂದ, 132 ನೇ ಬೂತಿನ ಅಧ್ಯಕ್ಷರಾದ ಹರಿಪ್ರಸಾದ್, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಂಜಿತ್ ಶೆಟ್ಟಿ, ಸರೋಜಿನಿ, ಪ್ರದೀಪ್, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.