ಮಂಗಳೂರು, ಜ. ೨೯: ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ಯೂತ್ ರೆಡ್ ಕ್ರಾಸ್ ಘಟಕ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್, ಲಯನ್ಸ್ ಕ್ಲಬ್ ಕುಡ್ಲ ಇವರ ಆಶ್ರಯದಲ್ಲಿ ರಕ್ತದಾನ ಶಿಬಿರ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆಯಿತು.
ಲಯನ್ಸ್ ಕ್ಲಬ್ ಕುಡ್ಲ ಅಧ್ಯಕ್ಷ ಜ್ಞಾನೇಶ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾಅತನಾಡಿದ ಅವರು ರಕ್ತದಾನ ಶ್ರೇಷ್ಠ ಕಾರ್ಯವಾಗಿದೆ. ಇನ್ನೊಬ್ಬರನ್ನು ರಕ್ಷಿಸುವ ಸಲುವಾಗಿ ರಕ್ತದಾನ ಮಾಡುವುದು ಅತ್ಯಗತ್ಯ ಎಂದರು. ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ಅಧ್ಯಕ್ಷತೆ ವಹಿಸಿದ್ದರು. ೨೪೪ ರಕ್ತದಾನ ಶಿಬಿರಗಳನ್ನು ಸಂಘಟಿಸಿದ ನಾಗೇಶ್ ಕುಮಾರ್ ಎನ್.ಜೆ. ಮಾತನಾಡಿ, ಇತರರಿಗೆ ನೆರವಾದಾಗ ಮಾತ್ರ ವ್ಯಕ್ತಿಯ ಮೌಲ್ಯ ವೃದ್ಧಿಸುತ್ತದೆ.
ರಕ್ತದಾನ ಮಾಡಿದರೆ ನಮ್ಮ ಆರೋಗ್ಯವು ವೃದ್ಧಿಸುವ ಜತೆಗೆ ಮತ್ತೊಂದು ಜೀವವನ್ನು ರಕ್ಷಿಸಿದಂತಾಗುತ್ತದೆ ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಧಾಕರನ್ ಟಿ., ಐ.ಕ್ಯೂ.ಎ.ಸಿ ಸಂಯೋಜಕ ದೇವಿಪ್ರಸಾದ್, ಯೂತ್ ರೆಡ್ ಕ್ರಾಸ್ ಸಂಯೋಜಕರುಗಳಾದ ಡಾ. ಮಹೇಶ್ ಕೆ.ಬಿ., ನಯನಾ ಕುಮಾರಿ ಕೆ., ರಘುಪತಿ ಉಪಸ್ಥಿತರಿದ್ದರು.