ಮಂಗಳೂರು: ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟದ ಬಗ್ಗೆ ಡಿಜಿಪಿ ಪ್ರವೀಣ್ ಸೂದ್ ಮಂಗಳೂರು ಕಮಿಷನರ್ ಕಚೇರಿಯಲ್ಲಿ ಹೇಳಿಕೆ ನೀಡಿದ್ದು, ತನಿಖೆ ಮಾಡ್ತಾ ಇದ್ದೇವೆ, ಈಗ ಅದನ್ನು ಹೇಳೋದಕ್ಕೆ ಆಗೋದಿಲ್ಲ. ಸದ್ಯ ಆರೋಪಿಯ ಪ್ರಾಣ ಉಳಿಸಬೇಕು, ಅದು ನಮಗೆ ಅತೀ ಅಗತ್ಯ. ಅವನ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಗೆ ಬರುತ್ತೆ ಎಂದು ಹೇಳಿದರು.
ತನಿಖೆ ನಡಿತಾ ಇದೆ. ಎನ್.ಐ.ಎ ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು ನಮ್ಮ ಜೊತೆ ಇದೆ. ಅಧಿಕೃತವಾಗಿ ಸದ್ಯದಲ್ಲೇ ಈ ಪ್ರಕರಣ ಎನ್.ಐ.ಎಗೆ ಹಸ್ತಾಂತರ ಆಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಲೆಟರ್ ಕೂಡ ಕೊಡಲಾಗಿದೆ ಎಂದರು.
ತಮಿಳುನಾಡು, ಕೇರಳ ಎಲ್ಲಾ ಕಡೆಗಳಲ್ಲೂ ನಮ್ಮ ತನಿಖೆ ನಡಿತಾ ಇದೆ. ನಮ್ಮ ಪೊಲೀಸರು ಕೂಡ ಈ ಬಗ್ಗೆ ವಿಚಾರಣೆ ಮುಂದುವರೆಸಿದ್ದಾರೆ. ನಾವು ಹಲವು ಜನರನ್ನ ವಶಕ್ಕೆ ಪಡೆದಿದ್ದೇವೆ ಹಾಗೆಂದ ಮಾತ್ರಕ್ಕೆ ಅವರೆಲ್ಲರು ಆರೋಪಿಗಳೇ ಆಗಿರಲ್ಲ. ಅವರನ್ನು ನಾವು ಬಂಧಿಸ್ತಾ ಇಲ್ಲ, ವಿಚಾರಣೆಗೆ ಕರೆ ತರ್ತೀವಿ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಈ ವರೆಗೆ ಬೆಂಗಳೂರು ಸೇರಿ ಎಂಟು ಕಡೆ ದಾಳಿ ನಡೆಸಿ ನಾಲ್ಕು ಜನರನ್ನ ವಶಕ್ಕೆ ಪಡೆದಿದ್ದೇವೆ ಅಷ್ಟೇ. ಆರೋಪಿಗಳು ಅಂತ ಯಾರನ್ನೂ ನಾವು ವಶಕ್ಕೆ ಪಡೆದಿಲ್ಲ. ನಾವು ಎಲ್ಲಾ ರೀತಿಯಿಂದ ತನಿಖೆ ಮಾಡ್ತಾ ಇದೀವಿ. ನಾವು ಒಬ್ಬರನ್ನ ಹಿಡಿಯೋದು ಪ್ರಶ್ನೆ ಅಲ್ಲ, ಈ ಕೃತ್ಯದ ಹಿಂದಿರೋರು ಬೇಕು ಎಂದರು.