ಮಂಗಳೂರು: ಮಂಗಳೂರು ದಸರಾವನ್ನು ಈ ಬಾರಿ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗುತ್ತಿದ್ದು, ಜೀಯಸ್ (Zeus) ಫಿಟ್ನೆಸ್ ಕ್ಲಬ್ ಸಹಯೋಗದಲ್ಲಿ 7 ಕಿಲೋ ಮೀಟರ್ ನೈಟ್ ಮ್ಯಾರಾಥಾನ್ ಹಾಗೂ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ರಾಜ್ಯ ಮಟ್ಟದ ಪೋಟೋಗ್ರಾಫಿ ಹಾಗೂ ವಿಡಿಯೋಗ್ರಾಫಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮರಾಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರು ದಸರಾ ವೈಭವವನ್ನು ಹೆಚ್ಚಿಸುವ ಸಲುವಾಗಿ ಇಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈಗಾಗಲೇ ನೈಟ್ ಮ್ಯಾರಾಥಾನ್ ಗೆ 800 ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದು, 1 ಸಾವಿರಕ್ಕೂ ಹೆಚ್ಚು ಮಂದಿ ಮ್ಯಾರಾಥಾನ್ ಗೆ ಹೆಸರು ನೋಂದಣಿ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಭಾನುವಾರ ರಾತ್ರಿ 8 ಗಂಟೆಗೆ ಮ್ಯಾರಾಥಾನ್ ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಚಾಲನೆ ನೀಡಲಿದ್ದಾರೆ. ಮ್ಯಾರಾಥಾನ್ ನಲ್ಲಿ ವಿಜೇತರಿಗೆ ಪ್ರಥಮ. ದ್ವಿತೀಯ, ತೃತೀಯ ಬಹುಮಾನ ನೀಡಲಾಗುತ್ತದೆ. ಪ್ರಶಸ್ತಿ ನಗದು ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ. ಇದರ ಜತೆಗೆ ಶಾರದಾ ವೈಭವ, ಹುಲಿವೇಷ ವೈಭವ, ಬದುಕಿನ ದಸರಾ ಹಾಗೂ ವೈಭವ ದಸರಾ ಎಂಬ ನಾಲ್ಕು ವಿಭಾಗಗಳಲ್ಲಿ ರಾಜ್ಯ ಮಟ್ಟದ ಪೋಟೊಗ್ರಾಫಿ ಹಾಗೂ ವಿಡಿಯೋಗ್ರಾಫಿ ಸ್ಪರ್ಧೆ ನಡೆಯಲಿದೆ ಎಂದರು.
ಸ್ಪರ್ಧೆಗೆ ಪೋಟೋ ಹಾಗೂ ವಿಡಿಯೊ ಕಳುಹಿಸಲು ಅಕ್ಟೋಬರ್ 31 ಕೊನೆ ದಿನ, ಈ ಸ್ಪರ್ಧೆಯನ್ನು ವೃತ್ತಿಪರರಿಗಾಗಿ ಆಯೋಜನೆ ಮಾಡಿರುವುದರಿಂದ ಮೊಬೈಲ್ ಪೋಟೋ ಹಾಗೂ ವಿಡಿಯೊಗಳನ್ನು ಸ್ಪರ್ಧೆ ಪರಿಗಣಿಸಲಾಗುವುದಿಲ್ಲ. ರಾಜ್ಯದ ಯಾವುದೇ ವೃತ್ತಿಪರ ಛಾಯಾಗ್ರಾಹಕ ಸಂಘದ ಸದಸ್ಯತ್ವ ಪಡೆದವರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಟ್ಟು 1 ಲಕ್ಷ ಮೊತ್ತ ಬಹುಮಾನ ನಿಗದಿ ಪಡಿಸಲಾಗಿದೆ. ಈ ಬಾರಿ ದಸರಾಕ್ಕೆ ಚಾಲನೆ ನೀಡಲು ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬರಲಿದ್ದಾರೆ. ಮಾಜಿ ಕೇಂದ್ರ ಸಚಿವ ಹಾಗೂ ಕುದ್ರೋಳಿ ದೇವಸ್ಥಾನದ ರೂವಾರಿ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತದೆ ಎಂದರು.
ಜೀಯಸ್ (Zeus) ಫಿಟ್ನೆಸ್ ಕ್ಲಬ್ ನ ಮಾಲೀಕ ರಾಜೇಶ್ ಪಟ್ಟಾಲಿ, ಸೌತ್ ಕೆನರಾ ಪೊಟೋಗ್ರಾಫರ್ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಅಡ್ಯಾರ್, ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಜಗನ್ನಾಥ ಶೆಟ್ಟಿ, ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.