ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆ.ಆರ್.ಲೋಬೋ ಅವರು ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆ ಬಗ್ಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ವಿಧಾನಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜ ಅವರು ಜೆ,ಆರ್. ಲೋಬೋ ಅವರು ಗುರುವಾರ ಬೆಳಗ್ಗೆ ನಗರದ ವಿವಿಧ ದೇವಾಲಯಗಳು, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವರು.
ಬಳಿಕ ಬೆಳಗ್ಗೆ 9.30 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕೇತ್ರದಲ್ಲಿ ಪೂಜೆ ಸಲ್ಲಿಸಿ ಪಕ್ಷದ ನಾಯಕರು, ಕಾರ್ಯಕರ್ತರು ಅಭಿಮಾನಿಗಳ ಜತೆಗೆ ಪಾದಯಾತ್ರೆಯಲ್ಲಿ ಮಣ್ಣಗುಡ್ಡೆ ಮಂಗಳಾಸ್ಟೇಡಿಯಂ ಬಳಿ ಆಗಮಿಸುವರು. ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು ಪಕ್ಷದ ಮುಖಂಡರು ಭಾಗವಹಿಸುವರು. ಬಳಿಕ ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ 12.15ಕ್ಕೆ ನಾಮಪತ್ರ ಸಲ್ಲಿಸುವರು.
ಕ್ಷೇತ್ರದಲ್ಲಿ ಕಾಂಗ್ರೆಸ್ಪರ ಅಲೆ ಇದ್ದು ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಅವರು 20,000 ಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಲಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಆಡಳಿತದ ಬಗ್ಗೆ ಜನರಿಗೆ ಭ್ರಮನಿರಸನವಾಗಿದೆ ಎಂದವರು ಹೇಳಿದರು.
ಜೆ.ಆರ್. ಲೋಬೋ ಅವರು ಶಾಸಕರಾಗಿದ್ದ ಅವಧಿಯಲ್ಲಿ ಮಂಗಳೂರು ವಿಧಾನಸಸಭಾ ಕ್ಷೇತ್ರ ಅಭೂತಪೂರ್ವ ಅಭಿವೃದ್ಧಿ ಕಂಡಿದೆ. ಅದರೆ ಪ್ರಸ್ತುತ ಬಿಜೆಪಿ ಶಾಸಕರ ಅವಧಿಯಲ್ಲಿ ಯಾವುದೇ ಹೊಸ ಅನುದಾನಗಳು ಕ್ಷೇತ್ರಕ್ಕೆ ಬಂದಿಲ್ಲ. ಹಿಂದೆ ಲೋಬೋ ಅವರ ಶಾಸಕತ್ವದ ಅವಧಿಯಲ್ಲಿ ಮಂಜೂರು ಆಗಿದ್ದ ಅನುದಾನಗಳು, ಯೋಜನೆಗಳು ಮಾತ್ರ ಅನುಷ್ಟಾನ ಆಗಿವೆ. ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರ ಅವಧಿಯಲ್ಲಿ ಯಾವುದೆಲ್ಲ ಯೋಜನೆಗಳು ಮಂಜೂರು ಆಗಿವೆ, ಎಷ್ಟು ಅನುದಾನಗಳು ಬಂದಿವೆ ಎಂಬ ಬಗ್ಗೆ ಬಿಜೆಪಿ ಶ್ವೇತಪತ್ರ ಹೊರಡಿಸಲಿ ಎಂದರು.
ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಎಂ.ಶಶಿಧರ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಅಬ್ದುಲ್ ಸಲೀಂ.,ಟಿ.ಕೆ.ಸುಧೀರ್, ಸಬಿತಾ ಮಿಸ್ಕಿತ್, ಮೋಹನ್ ಶೆಟ್ಟಿ, ಅಲೆಸ್ಟರ್ ಡಿಕುನ್ನಾ ಉಪಸ್ಥಿತರಿದ್ದರು.