ಮಂಗಳೂರು: ವಾಮಂಜೂರು ಮಂಗಳಜ್ಯೋತಿಯಲ್ಲಿ ಭೂಮಿ ಹಕ್ಕು ಸಮಾವೇಶವು ತಾ. 16-10-2022 ರಂದು ಯಶಸ್ವಿಯಾಗಿ ಜರುಗಿತು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕರಾದ ಡಾ. ಎಸ್ ವೈ ಗುರುಶಾಂತ್ರವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ, ದೇಶವು ಸ್ವಾತಂತ್ರ್ಯ ಹೋರಾಟದ 75ನೇ ಸಂವತ್ಸರದ ಸಮಯದಲ್ಲಿ ಆದಿವಾಸಿ ಸಮುದಾಯವು ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸಬೇಕಾಗಿ ಬಂದಿರುವುದು ವಿಷಾಧನೀಯ. ದೇಶದ ಉದ್ದಗಲಕ್ಕೂ ಆದಿವಾಸಿ ಸಮುದಾಯಗಳು ಬದುಕುವ ಹಕ್ಕಿಗಾಗಿ, ಭೂಮಿಯ ಹಕ್ಕಿಗಾಗಿ ನಿರಂತರ ಹೋರಾಟ ನಡೆಸುತ್ತಿದೆ ಎಂದು ಹೇಳಿದರು. ಕರಾವಳಿ ಕರ್ನಾಟಕದ ಆದಿವಾಸಿ ಕೊರಗ ಸಮುದಾಯದ 33 ಕುಟುಂಬಗಳ ಗುರುತಿಸಲಾದ ಮನೆನಿವೇಶನ ಪಡೆಯಲು ನಿರಂತರ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಗತಿಪರ ಚಿಂತಕರೂ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕರಾದ ಡಾ. ಕೃಷ್ಣಪ್ಪ ಕೊಂಚಾಡಿಯವರು ಮಾತನಾಡುತ್ತಾ, ಮಹಮ್ಮದ್ ಫೀರ್ ವರದಿಯ ಸಮಗ್ರ ಅನುಷ್ಠಾನವಾಗಬೇಕಾಗಿದೆ. ಆ ಹಿನ್ನೆಲೆಯಲ್ಲಿ ಜಮೀನು, ಜಂಗಲ್, ಜಲ್ ಈ ಮೂರು ಧ್ಯೇಯ ವಾಕ್ಯಗಳ ಸಾಕ್ಷೀಕರಿಸಲು ಹೋರಾಟ ಅನಿವಾರ್ಯವೆಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾದ ದ.ಕ ಜಿಲ್ಲಾ ಸಿಪಿಐಎಂ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುಮೀಲ್ ಕುಮಾರ್ ಬಜಾಲ್ರವರು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು.
ಸಭೆಯು ದಿನಾಂಕ 28-11-2022ರಂದು ಭೂಮಿಯ ಹಕ್ಕಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.
ವೇದಿಕೆಯಲ್ಲಿ ಸಾಹಿತಿ ಬಿ. ಎಂ ರೋಹಿಣಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮಂಗಳೂರು ನಗರ ಕಾರ್ಯದರ್ಶಿ ಶಶಿಕಲಾ ನಂತೂರು, ಮಂಗಳಜ್ಯೋತಿ ಘಟಕದ ಅಧ್ಯಕ್ಷರಾದ ಕರಿಯ ಕೆ, ಪದಾಧಿಕಾರಿ ಮಂಜುಳ ವಾಮಂಜೂರು, ಮಂಗಳಜ್ಯೋತಿ ಘಟಕದ ಕಾನೂನು ಸಲಹೆಗಾರರಾದ ಮನೋಜ್ ವಾಮಂಜೂರು, ಯೋಗೀಶ್ ಜಪ್ಪಿನಮೊಗರು, ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷರಾದ ರಾಧಕೃಷ್ಣ ಬಿ, ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವ, ಹೇಮ ಪಚ್ಚನಾಡಿ, ಶೇಖರ್ ಮಂಗಳಜ್ಯೋತಿ, ಅಚ್ಯುತ ಕಾವೂರು, ದೊಂಬಯ್ಯ ಕಾವೂರು ಉಪಸ್ಥಿತರಿದ್ದರು.
ಸಮಾವೇಶಕ್ಕೆ ಶುಭಾಶಯ ಕೋರಿ ಮುನೀರ್ ಕಾಟಿಪಳ್ಳ, ದಿನೇಶ್ ಹೆಗ್ಡೆ ಉಳಿಪಾಡಿ, ಸಂತೋಷ್ ಬಜಾಲ್, ಬಿ.ಕೆ. ಇಮ್ತಿಯಾಜ್ ಮೊದಲಾದವರು ಮಾತನಾಡಿದರು.
ಸಮಾವೇಶದಲ್ಲಿ ಕಾರ್ಯಕ್ರಮದ ನಿರ್ವಹಣೆಯನ್ನು ಮಂಗಳಜ್ಯೋತಿ ಘಟಕದ ಸಹಸಂಚಾಲಕರಾದ ಪುನೀತ್ಕುಮಾರ್ ಮಾಡಿದರು. ಮೊದಲಿಗೆ ಮಂಗಳಜ್ಯೋತಿ ಘಟಕದ ಸಹಸಂಚಾಲಕರಾದ ವಿಘ್ನೇಶ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.