ಮಂಗಳೂರು: ಮಂಗಳೂರು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಡಳಿತದಲ್ಲಿರುವ ಇತಿಹಾಸ ಪ್ರಸಿದ್ಧ ಕುಲಾಲ ಸಮುದಾಯದ ಕುಲದೇವರಾದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನವು ಶಿಲಾಮಯವಾಗಿ ರೂ. ಹತ್ತು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಮೇ ೧೪ರಿಂದ ೨೫ವರೆಗೆ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಬಹಳ ವಿಜೃಂಭನೆಯಿಂದ ಜರಗಲಿದೆ ಎಂದು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಮಯೂರ್ ಉಳ್ಳಾಲ್ ತಿಳಿಸಿದರು.
ಅವರು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಮೇ ೧೪ರಿಂದ ೨೫ವರೆಗೆ ಜರಗಲಿರುವ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಬಗ್ಗೆ ಮೇ ೧೧ರಂದು ದೇವಸ್ಥಾನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. ವಿಷ್ಣುಸ್ವರೂಪಿ ಶ್ರೀ ವೀರನಾರಾಯಣ ದೇವರ ಸಾನಿಧ್ಯವು ದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿರಳವಾಗಿರುವ ದೇವಸ್ಥಾನ. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಇದರ ಆಡಳಿತ ಸಮಿತಿ, ಸೇವಾ ಟ್ರಸ್ಟ್, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಜೊತೆಯಾಗಿ ಶ್ರೀ ದೇವಸ್ಥಾನದ ಜೀರ್ಣೋದ್ದಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು, ಇದಕ್ಕೆಲ್ಲ ಮಾಣಿಲ ಶ್ರೀಧಾಮದ ಯೋಗಿಕೌಸ್ತುಭ ಕರ್ಮಯೋಗಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಬಿ. ಪ್ರೇಮಾನಂದ ಕುಲಾಲ್ ಮಾಹಿತಿ ನೀಡಿ, ಮೇ ೧೪ರಂದು ಸಂಜೆ ೩.೩೦ರಿಂದ ಕದ್ರಿ ದೇವಸ್ಥಾನದಿಂದ ಮಲ್ಲಿಕಟ್ಟೆ-ನಂತೂರು ಜಂಕ್ಷನ್ ಮೂಲಕ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆಯ ಬೃಹತ್ ಭವ್ಯ ಮೆರವಣಿಗೆ ಜರಗಲಿದೆ. ಅವಿಭಜಿತ ಜಿಲ್ಲೆಗಳಿಂದ ಮಾತ್ರವಲ್ಲದೆ ರಾಜ್ಯದ ವಿವಿಧೆಡೆಗಳಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಆಕರ್ಷಕ ಟ್ಯಾಬ್ಲೋಗಳು, ಚೆಂಡೆ ವಾದಕಗಳು, ಅತ್ಯಾಕರ್ಷಕ ಬರ್ಕೆ ಹುಲಿವೇಷ, ಕುಣಿತ ಭಜನೆ, ಗೊಂಬೆಕುಣಿತ, ತಾಲೀಮು ಮೆರವಣಿಗೆಗೆ ಮೆರುಗು ನೀಡಲಿದೆ. ಬ್ರಹ್ಮಕಲಶೋತ್ಸವ ಸಮಿತಿಯ ಮಾರ್ಗದರ್ಶಕರು ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನ ಮತ್ತು ಪಾವನಸಾನಿಧ್ಯದಲ್ಲಿ ಹೊರೆಕಾಣಕೆ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ಹಲವು ಅತಿಥಿ ಗಣ್ಯರು, ಅವಿಭಜಿತ ಜಿಲ್ಲೆಯ ಕುಲಾಲ ಬಾಂಧವರು, ನಾಡಿನ ಸಮಸ್ತ ಭಕ್ತರು ಮಾತ್ರವಲ್ಲದೆ ಮುಂಬೈ, ಪೂನಾ, ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲು ಪಡೆಯಲಿದ್ದಾರೆ ಎಂದವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪುರುಷೋತ್ತಮ ಕುಲಾಲ್ ಆಡಳಿತ ಮೊಕ್ತೇಸರರು ಶ್ರೀ ವೀರನಾರಾಯಣ ದೇವಸ್ಥಾನ ಮತ್ತು ಗೌರವ ಸಲಹೆಗಾರರು ಬ್ರಹ್ಮಕಲಶೋತ್ಸವ ಸಮಿತಿ, ದಾಮೋದರ ಎ. ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಮತ್ತು ಗೌರವಾಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ, ಕೆ. ಸುಂದರ ಕುಲಾಲ್ ಅಧ್ಯಕ್ಷರು ಸೇವಾ ಸಮಿತಿ ಮತ್ತು ಸಂಚಾಲಕರು ಬ್ರಹ್ಮಕಲಶೋತ್ಸವ ಸಮಿತಿ, ಗಿರಿಧರ ಜೆ. ಮೂಲ್ಯ ಪ್ರಧಾನ ಕಾರ್ಯದರ್ಶಿ ಬ್ರಹ್ಮಕಲಶೋತ್ಸವ ಸಮಿತಿ, ಸುರೇಶ್ ಕುಲಾಲ್ ಕಾರ್ಯಾಧ್ಯಕ್ಷರು ಸ್ವಾಗತ ಸಮಿತಿ, ಎಂ.ಪಿ. ಬಂಗೇರ ಕಾರ್ಯದರ್ಶಿ ಜೀರ್ಣೋದ್ಧಾರ ಸಮಿತಿ, ಜಲಜಾಕ್ಷಿ ಪಿ. ಅಧ್ಯಕ್ಷರು ಮಹಿಳಾ ವಿಭಾಗ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಮತ್ತು ಸಂಚಾಲಕರು, ಬ್ರಹ್ಮಕಲಶೋತ್ಸವ ಪೂರ್ಣಕುಂಭ ಸ್ವಾಗತ ಸಮಿತಿ ಉಪಸ್ಥಿತರಿದ್ದರು.