ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಶುಕ್ರವಾರ ನಡೆಸಲಾಗಿದೆ.
ನಗರದ ಬಳ್ಳಾಲ್ಭಾಗ್ನಲ್ಲಿರುವ ಬಿಜೆಪಿ ವಿಭಾಗ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ವಕ್ತಾರ ಎಂ.ಜಿ. ಮಹೇಶ್ ಅವರು ಪ್ರತಿಯೊಂದು ಕ್ಷೇತ್ರದಲ್ಲಿ ಮಂಡಲ (ವಿಧಾನಸಭಾ) ಸಮಿತಿ, ಶಕ್ತಿಕೇಂದ್ರದ ಪದಾಧಿಕಾರಿಗಳು, ಜಿ.ಪಂ., ತಾ.ಪಂ. ಮಾಜಿ ಸದಸ್ಯರು, ಮಾಜಿ ಶಾಸಕರು,ವಿಧಾನ ಪರಿಷತ್ ಸದಸ್ಯರು ಸೇರಿದಂತೆ 197ರಿಂದ 220 ಮಂದಿಯ ಅಭಿಪ್ರಾಯ ಸಂಗ್ರಹಿಸಲಾಗಿದ್ದು ಕ್ಷೇತ್ರಕ್ಕೆಒಟ್ಟು ಮೂರು ಅಭ್ಯರ್ಥಿಗಳ ಹೆಸರು ಪಡೆಯಲಾಗಿದೆ.
ಬೆಂಗಳೂರಿನಲ್ಲಿ ಜಿಲ್ಲಾ ಕೋರ್ ಸಮಿತಿಗಳ ಸದಸ್ಯರ ಸಭೆ ನಡೆಯಲಿದೆ. ಬಳಿಕ ರಾಜ್ಯ ಕೋರ್ ಸಮಿತಿ ಸಭೆ ನಡೆದು ಅಂತಿಮವಾಗಿ ಅಭ್ಯರ್ಥಿಯ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಸಲಾಗುವುದು. ಈ ಎಲ್ಲಾ ಪ್ರಕ್ರಿಯೆಗಳು 7 ದಿನಗಳೊಳಗೆ ಪೂರ್ಣಗೊಳ್ಳಲಿದೆ ಎಂದರು.
ಬಿಜೆಪಿಯ ವಿರುದ್ದ ಭ್ರಷ್ಟಚಾರದ ಆರೋಪ ಹೊರಿಸುತ್ತಿರುವ ಕಾಂಗ್ರೆಸ್ನ 29 ಶಾಸಕರು ಲಂಚ ಪಡೆಯುತ್ತಿರುವುದು ಮಾಧ್ಯಮವೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿದೆ ಎಂದು ಆರೋಪಿಸಿದ ಅವರು ಕಾಂಗ್ರೆಸ್ ಭ್ರಷ್ಟಚಾರದ ಗಂಗೋತ್ರಿ .ಅವರಿಗೆ ಬಿಜೆಪಿ ವಿರುದ್ದ ಶೇ.40 ಕಮಿಷನ್ ಆರೋಪ ಮಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಬಿಜೆಪಿ ವಕ್ತಾರರಾದ ರವಿಶಂಕರ್ ಮಿಜಾರ್, ಜಗದೀಶ ಶೇಣವ, ಸಂಜಯ ಪ್ರಭು, ಮುಖಂಡರಾದ ಸಂದೇಶ್ ಶೆಟ್ಟಿ, ರಣದೀಪ್ ಕಾಂಚನ್ ಉಪಸ್ಥಿತರಿದ್ದರು.