ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರಕ್ಕೆ ಉದ್ಯಮಿ ಇನಾಯತ್ ಅಲಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದೆ. ಇತ್ತ ಟಿಕೆಟ್ಗಾಗಿ ಭಾರಿ ಲಾಬಿ ನಡೆಸಿದ್ದ ಮೊಹಿಯುದ್ದೀನ್ ಬಾವಾ ಅವರಿಗೆ ಇದರಿಂದ ಹಿನ್ನಡೆಯಾಗಿದೆ.
ಬಾವಾ ಪರ ಮಾಜಿ ಸಿಎಂ ಸಿದ್ದರಾಮಯ್ಯ, ಇನಾಯತ್ ಅಲಿ ಪರವಾಗಿ ಡಿಕೆಶಿ ಬ್ಯಾಟಿಂಗ್ ನಡೆಸಿದ್ದರು. ಕೊನೆಯಲ್ಲಿ ಅಲಿ ಕೈ ಮೇಲಾಗಿದ್ದು, ಪಕ್ಷ ಅವರಿಗೆ ಟಿಕೆಟ್ ಘೋಷಿಸಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದ ಬಾವ ಟಿಕೆಟ್ಗಾಗಿ ನಿರಂತರ ಲಾಬಿ ನಡೆಸಿದ್ದರು. ಆದರೆ ಟಿಕೆಟ್ ದೊರೆಯದಿರುವುದು ಖಾತ್ರಿಯಾದ ಬೆನ್ನಲ್ಲೆ ಇಂದು (ಗುರುವಾರ) 11ಗಂಟೆಗೆ ಅಭಿಮಾನಿಗಳ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಈ ಬಗ್ಗೆ ಅವರು ವಿಡಿಯೋ ಹಂಚಿಕೊಂಡಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ಹಣದ ಆಮಿಷದ ವಿಷಯದ ಮುಂದೆ 20 ವರ್ಷದ ಸೇವೆಯ ವಿಚಾರ ಗೌಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.