ಮಂಗಳೂರು: ಭೂತಾನ್, ಬರ್ಮಾ ದೇಶದ ಅಡಿಕೆಯಿಂದಾಗಿ ಕರಾವಳಿಯ ಅಡಿಕೆಗೆ ದರ ಇಳಿಕೆಯಾಗುತ್ತಿದೆ ಎಂಬ ಆರೋಪಗಳಿದ್ದವು. ಈ ಬಗ್ಗೆ ಕ್ಯಾಂಪೋ, ಮ್ಯಾಮ್ಮೋಸ್, ಅಡಿಕೆ ಮಾರಾಟ ಮಹಾಮಂಡಳಿ ಸತತ ಒತ್ತಡದ ಪರಿಣಾಮವಾಗಿ ಕೇಂದ್ರ ಸರಕಾರ ವಿದೇಶಿ ಅಡಿಕೆ ಅಮದಿನ ಮೇಲೆ ತೆರಿಗೆಯನ್ನು ಹೆಚ್ಚಿಸಿದೆ. ಅಡಿಕೆಯ ಕನಿಷ್ಠ ಅಮದು ಬೆಲೆಯನ್ನು ಈಗ ಇರುವ ಕೆಜಿಗೆ 251 ರೂ.ಗಳಿಂದ ೩೫೧ ರೂ.ಗಳಿಗೆ ಹೆಚ್ಚಿಸಿದೆ ಎಂದು ಕ್ಯಾಂಪೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರದ ಈ ಕ್ರಮದಿಂದಾಗಿ ವಿದೇಶದಿಂದ ಬರುವ ಕಳಪೆ ಗುಣಮಟ್ಟದ ಅಡಿಕೆಯ ಆಮದಿನ ಮೇಲೆ ಭಾರೀ ಹೊಡೆತ ಬೀಳಲಿದೆ. ಉತ್ತಮ ಗುಣಮಟ್ಟದ ದೇಶಿ ಅಡಿಕೆಗೆ ಬೇಡಿಕೆ ಬರಲಿದೆ ಮತ್ತು ದರದಲ್ಲಿ ಸ್ಥಿರತೆ ಕಾಣಲಿದ್ದು ಅಡಿಕೆ ಮಾರುಕಟ್ಟೆ ಚೇತರಿಕೆಯಾಗಲಿದೆ ಎಂದು ಹೇಳಿದರು.
ವಾಣಿಜ್ಯ ಸಚಿವರಿಗೆ ಮನವಿ ನೀಡಿದ್ದ ನಿಯೋಗ: ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಕ್ಯಾಂಪೋ, ಮ್ಯಾಮೋಸ್, ಟಿಎಸ್ಎಸ್, ತುಮ್ಮೋಸ್, ಅಡಿಕೆ ಮಾರಾಟ ಮಹಾಮಂಡಳಿ ಮತ್ತು ಸಹಕಾರಿ ರಂಗದ ಹಿರಿಯರಾದ ಮಂಜಪ್ಪ ಹೊಸಬಾಳೆ ಹಾಗೂ ಸಹಕಾರ ಭಾರತಿಯ ರಾಷ್ಟ್ರೀಯ ಮುಖಂಡರಾದ ರಮೇಶ್ ವೈದ್ಯ ಮುಂತಾದ ಸದಸ್ಯರನ್ನೊಳಗೊಂಡ ನಿಯೋಗವು ದೆಹಲಿಗೆ ತೆರಳಿ ಆಮದು ಕನಿಷ್ಠ ಬೆಲೆಯನ್ನು ಹೆಚ್ಚಿಸುವಂತೆ ಕೃಷಿ ಮತ್ತು ವಾಣಿಜ್ಯ ಸಚಿವರಲ್ಲಿ ಮನವಿ ಮಾಡಿತ್ತು. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕ್ಯಾಂಪೋ 5ನೇ ಕೃಷಿ ಯಂತ್ರಮೇಳದಲ್ಲಿ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೂಡ ಈ ಬಗ್ಗೆ ಘೋಷಣೆ ಮಾಡಿದ್ದರು, ನಿರೀಕ್ಷೆಯಂತೆ ಕೇಂದ್ರ ಸರಕಾರ ಆಮದು ಅಡಿಕೆಯ ಕನಿಷ್ಠ ಬೆಲೆಯನ್ನು ಹೆಚ್ಚಿಸಿದ್ದು ಕ್ಯಾಂಪೋ ವತಿಯಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದು ಅಧ್ಯಕ್ಷ ಕೊಡ್ಡಿ ಹೇಳಿದರು.