ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಹಿಯ್ಯುದ್ದಿನ್ ಜುಮ್ಮಾ ಮಸೀದಿ ಪಕ್ಕಲಡ್ಕ ಇದರ ಜಮಾಅತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲ ಮಾತನಾಡುತ್ತಾ ಬದಲಾದ ಕಾಲಘಟ್ಟದಲ್ಲಿ ಸೌಹಾರ್ದತೆ ಅನ್ನೋದು ಹೆಸರಿಗಷ್ಟೇ ಉಳಿದಿದೆ. ಮತ್ತು ಇರುವ ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನಗಳು ನಿರಂತರವಾಗಿದ್ದು ಬಹುತೇಕ ಜನ ವಾಸ್ತವ ಪರಿಸ್ಥಿತಿಯ ಸಮೂಹಸನ್ನಿಗೆ ಒಳಗಾಗುವ ನಡುವೆಯೂ ಪಕ್ಕಲಡ್ಕ ಪ್ರದೇಶದ ಶಾಂತಿಪ್ರಿಯ ಜನ ಇವತ್ತಿಗೂ ಜಾತಿ ಮತ ಬೇಧವಿಲ್ಲದೆ ಪರಸ್ಪರ ಪ್ರೀತಿ, ಬಾಂಧವ್ಯ, ಸಹಕಾರಗಳ ಮೂಲಕ ಸೌಹಾರ್ದಮಯ ಬದುಕನ್ನು ನಡೆಸುತ್ತಿದ್ದಾರೆ.ಇದು ಇವತ್ತಿನ ಸಮಾಜಕ್ಕೆ ಮಾದರಿಯಾಗಬೇಕಾಗಿದೆ. ಆದರೆ ಇಂತಹ ಪ್ರೀತಿ,ಸಹಬಾಳ್ವೆ ನಡೆಸಲು ಸಾಧ್ಯವಾಗಿದ್ದು ಊರಲ್ಲಿ ಸದಾ ಸೌಹಾರ್ಧತೆ ಉಳಿಯಲು ಶ್ರಮಿಸುವ ಡಿವೈಎಫ್ಐ ಸಂಘಟನೆ ಮತ್ತು ಪಕ್ಕಲಡ್ಕ ಯುವಕ ಮಂಡಲದಂತಹ ಜನಪರ ಸಂಸ್ಥೆಗಳಿಂದ ಎಂದರು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪಕ್ಕಲಡ್ಕ ಯುವಕ ಮಂಡಲದ ಮಾಜಿ ಮುಖಂಡರಾದ ಲಾರೆನ್ಸ್ ಡಿಸೋಜ, ನಾದಾ ಮಣಿನಾಲ್ಕೂರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಸತ್ಯ ನಾರಾಯಣ ಭಜನಾ ಮಂದಿರದ ಮಾಜಿ ಕಾರ್ಯದರ್ಶಿ ಲೊಕೇಶ್ ಎಂ, ಡಿವೈಎಫ್ಐ ಪಕ್ಕಲಡ್ಕ ಘಟಕದ ಅಧ್ಯಕ್ಷರಾದ ಜಗದೀಶ್ ಕುಲಾಲ್ ಉಪಸ್ಥಿತರಿದ್ದರು. ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ದೀಪಕ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಉದ್ಘಾಟನಾ ಸಭಾ ಕಾರ್ಯಕ್ರಮದ ನಂತರ ಕಲಾವಿದ ನಾದಾ ಮಣಿನಾಲ್ಕೂರು ಅವರಿಂದ ಕತ್ತಲ ಹಾಡು, ಸೌಹಾರ್ದ ಗೀತೆಗಳ ಮೂಲಕ ಹಣತೆ ಹಚ್ಚಿ ಮನದ ಕತ್ತಲೆ ದೂರ ಮಾಡುವ ಗಾನ ಲಹರಿ ಪ್ರಸ್ತುತ ಪಡಿಸಿದರು. ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ಪ್ರೀತೇಶ್ ಬಜಾಲ್ ಸ್ವಾಗತಿಸಿ, ನಾಗರಾಜ್ ಬಜಾಲ್ ನಿರೂಪಿಸಿದರು, ಡಿವೈಎಫ್ಐ ಮುಖಂಡ ಧೀರಾಜ್ ಬಜಾಲ್ ವಂದಿಸಿದರು.