ಮಂಗಳೂರು: ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜ ಹಾರಿಸುವುದು ಪ್ರತಿ ಭಾರತೀಯರ ಸಂಭ್ರಮ. ಆದರೆ ಮಂಗಳೂರಿನ ದೇವಾಂಗ ಭವನದಲ್ಲಿ ಪ್ರತಿದಿನವೂ ತ್ರಿವರ್ಣ ಧ್ವಜ ಅರಳಿಸುವ ಮಹಾತ್ಮರೊಬ್ಬರಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಮೂಲದ ಶರಣಪ್ಪ ಮನ್ನೇರಿ ಜಾಲಿಹಾಳ್ (65) ಮಂಗಳೂರಿನ ದೇವಾಂಗ ಭವನದ ಉಸ್ತುವಾರಿಯಾಗಿದ್ದು, 2022ರಿಂದ ಪ್ರತಿದಿನವೂ ತ್ರಿವರ್ಣ ಧ್ವಜ ಅರಳಿಸುತ್ತಾರೆ.
ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ದೇವಾಂಗ ಭವನದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ, ಸಂಜೆ 6 ಕ್ಕೆ ಅದನ್ನು ಇಳಿಸುತ್ತಿದ್ದಾರೆ. 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್ ಘರ್ ತಿರಂಗ’ ಕರೆ ಮೇರೆಗೆ ಧ್ವಜಸ್ತಂಭ ನಿರ್ಮಿಸಿ ತ್ರಿವರ್ಣ ಧ್ವಜ ಹಾರಿಸುವ ಸಂಪ್ರದಾಯ ಆರಂಭಿಸಲಾಯಿತು ಎಂದು ಭಗವತಿ ದೇವಸ್ಥಾನ, ಕುಕ್ಕಾಡಿ ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಹಾಗೂ ದೇವಾಂಗ ಭವನದ ಆಡಳಿತ ಟ್ರಸ್ಟಿ ಕ್ಷಿತಿ ಮಾಮ್ಲೂರ್ ಹೇಳಿದ್ದಾರೆ.