ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವ ಸಂಭ್ರಮವು 5ನೇ ದಿನಕ್ಕೆ ಹಾಗೂ ಕೊನೆಯ ದಿನಕ್ಕೆ ಪ್ರವೇಶಿಸುತ್ತಿದ್ದು ಮುಖ್ಯವಾಗಿ ಸಾಹಿತ್ಯಸಮ್ಮೇಳನದ ಅಧಿವೇಶನ ನಡೆಯಲಿದೆ. ಸಾಹಿತ್ಯ ಸಮ್ಮೇಳನವನ್ನು ರಾಷ್ಟ್ರಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ದೆಶಕ ಪಿ. ಶೇಷಾದ್ರಿ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕøತ ವಿದ್ವಾಂಸ, ಸಂದರ್ಶಕ ಪ್ರಾಧ್ಯಾಪಕ ವಿದ್ವಾನ್ ಡಾ.ಹೆಚ್.ವಿ.ನಾಗರಾಜ ರಾವ್ ವಹಿಸಿದ್ದಾರೆ. ಉಪನ್ಯಾಸಕರಾಗಿ ಸಾಹಿತ್ಯ ಪರಿಚಾರಕ ಮತ್ತು ಸುಶಿಕ್ಷಣ ಸೇವಾಪರ ಸಂಸ್ಥೆ ಸ್ಥಾಪಕ ಸತ್ಯೇಶ್ ಎನ್. ಬೆಳ್ಳೂರು, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ, ಕನ್ನಡ ಸಹಾಯಕ ಪ್ರಾಧ್ಯಾಪಕ ಮತ್ತು ಲೇಖಕಿ ಡಾ| ಗೀತಾ ವಸಂತ ಭಾಗವಹಿಸಲಿದ್ದಾರೆ.
ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 5.30 ರಿಂದ ಮಡಿಕೇರಿಯ ಮೇಘಾ ಭಟ್ ಇವರಿಂದ ಶಾಸ್ತ್ರೀಯ ಸಂಗೀತ ಬಳಿಕ ಬೆಂಗಳೂರಿನ ಅಪೂರ್ವ ಅನಿರುದ್ಧ ಇವರಿಂದ ವೀಣಾ ವಾದನ, ನಂತರ ರಾಣೆಬೆನ್ನೂರಿನ ವಿ. ರಜನಿ ಎಲ್. ಕರಿಗಾರ ಇವರಿಂದ ಹಿಂದೂಸ್ಥಾನಿ ಸಂಗೀತ, ಕೊನೆಯಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರದ ವಿದುಷಿ ಶಾಲಿನಿ ಆತ್ಮಭೂಷಣ್ ಇವರಿಂದ ಸಮೂಹ ನೃತ್ಯ ಮತ್ತು ಕೊನೆಯಲ್ಲಿ ಭದ್ರಾವತಿಯ ಪ್ರೀತಮ್ ಮೆಲೋಡಿ ಆರ್ಕೆಸ್ಟ್ರಾದ ಶಂಕರ್ ಬಾಬು ಅರ್ಪಿಸುವ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸಂಗೀತ ನೃತ್ಯ ವೈವಿಧ್ಯ: ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ 8.30 ರಿಂದ ಬಹು ಗ್ರ್ಯಾಮಿ ಪ್ರಶಸ್ತಿ ವಿಜೇತ, ಸಂಗೀತ ಸಂಯೋಜಕ ಮತ್ತು ಅರ್ಥ್ ಡೇ ನೆಟ್ವರ್ಕ್ನ ರಾಯಭಾರಿ, ಹೆಸರಾಂತ ಕಲಾವಿದ ರಿಕಿ ಕೇಜ್ ಅವರು ಸಂಗೀತ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಗೌರಿಮಾರುಕಟ್ಟೆ ಉತ್ಸವ ನೆರವೇರಲಿದೆ.
ನಾಳಿನ ಕಾರ್ಯಕ್ರಮ:
ಸಮವಸರಣ: ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ಬಾಹುಬಲಿ ಸೇವಾ ಸಮಿತಿ ಶ್ರಾವಕರಿಂದ ಧರ್ಮಸ್ಥಳದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಂಜೆ 6.30 ರಿಂದ ನಡೆಯಲಿದೆ.