ಬೆಳ್ತಂಗಡಿ: ಕರ್ನಾಟಕದ ಪುಣ್ಯಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷದಂತೆ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನ. 19 ರಿಂದ 23 ರವರೆಗೆ ನಡೆಯಲಿವೆ.
ನ.22 ರಂದು ಸರ್ವಧರ್ಮ ಮತ್ತು 23 ರಂದು ಸಾಹಿತ್ಯ ಸಮ್ಮೇಳನಗಳ 90 ನೇ ಅಧಿವೇಶನ ನಡೆಯಲಿವೆ. 22 ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5 ಗಂಟೆಯಿಂದ ನಡೆಯುವ ಸರ್ವಧರ್ಮ ಸಮ್ಮೇಳನವನ್ನು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಿವಮೊಗ್ಗದ ಬಹುಶ್ರುತ ವಿದ್ವಾಂಸ ಮತ್ತು ಸುಪ್ರಸಿದ್ಧ ನ್ಯಾಯವಾದಿ ಎಂ.ಆರ್.ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ.
ಉಪನ್ಯಾಸಕರಾಗಿ ಬಸ್ರಿಕಟ್ಟೆ ಧರ್ಮಗುರು ಫಾ. ಮಾರ್ಸೆಲ್ ಪಿಂಟೋ, ವಿಜಯಪುರ ಕ.ಸಾ.ಪ. ಜಿಲ್ಲಾಧ್ಯಕ್ಷ ಹಾಸಿಂಪೀರ ಇ ವಾಲೀಕಾರ, ಮೂಡಬಿದ್ರೆಯ ವಿಶ್ರಾಂತ ಮುಖ್ಯೋಪಾಧ್ಯಾಯ, ವಾಗ್ಮಿ ಮುನಿರಾಜ ರೆಂಜಾಳ ಭಾಗವಹಿಸಲಿದ್ದಾರೆ.
23 ರಂದು ನಡೆಯುವ ಸಾಹಿತ್ಯ ಸಮ್ಮೇಳನವನ್ನು ರಾಷ್ಟçಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ದೆಶಕೆ ಪಿ. ಶೇಷಾದ್ರಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ರಾಷ್ಟçಪ್ರಶಸ್ತಿ ಪುರಸ್ಕೃತ ವಿದ್ವಾಂಸ, ಸಂದರ್ಶಕ ಪ್ರಾಧ್ಯಾಪಕ ವಿದ್ವಾನ್ ಡಾ.ಹೆಚ್.ವಿ.ನಾಗರಾಜ ರಾವ್ ವಹಿಸಿದ್ದಾರೆ.
ಉಪನ್ಯಾಸಕರಾಗಿ ಸಾಹಿತ್ಯ ಪರಿಚಾರಕ ಮತ್ತು ಸುಶಿಕ್ಷಣ ಸೇವಾಪರ ಸಂಸ್ಥೆ ಸ್ಥಾಪಕ ಸತ್ಯೇಶ್ ಎನ್. ಬೆಳ್ಳೂರು, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ, ಕನ್ನಡ ಸಹಾಯಕ ಪ್ರಾಧ್ಯಾಪಕ ಮತ್ತು ಲೇಖಕಿ ಡಾ| ಗೀತಾ ವಸಂತ ಭಾಗವಹಿಸಲಿದ್ದಾರೆ.
ನ. 19 ರಂದು ಬೆಳಿಗ್ಗೆ 10.30ಕ್ಕೆ ಕ್ಷೇತ್ರದ ಸನಿಹದ ಶ್ರೀ ಮಂಜುನಾಥ ಪ್ರೌಢ ಶಾಲಾ ವಠಾರದಲ್ಲಿ ಏರ್ಪಡಿಸಲಾಗಿರುವ ರಾಜ್ಯ ಮಟ್ಟದ ವಸ್ತುಪ್ರದರ್ಶನವನ್ನು ಶಾಸಕ ಹರೀಶ ಪೂಂಜ ಉದ್ಘಾಟಿಸಲಿದ್ದಾರೆ. ಅದೇ ದಿನ ಸಂಜೆ 3 ಗಂಟೆಯಿAದ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಾಲಯದಿಂದ ಶ್ರೀಕ್ಷೇತ್ರ ಧರ್ಮಸ್ಥಳದವರೆಗೆ ಪಂಚಾಕ್ಷರಿ ಜಪದೊಂದಿಗೆ ಸುಮಾರು 25,000 ಭಕ್ತರಿಂದ 10 ನೇ ವರ್ಷದ ಪಾದಯಾತ್ರೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು: ನ. 19 ರಂದು ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ, 20 ರಂದು ಕೆರೆಕಟ್ಟೆ ಉತ್ಸವ, 21 ರಂದು ಲಲಿತೋದ್ಯಾನ ಉತ್ಸವ, 22 ರಂದು ಕಂಚಿಮಾರು ಕಟ್ಟೆ ಉತ್ಸವ, 23 ರಂದು ಗೌರಿಮಾರುಕಟ್ಟೆ ಉತ್ಸವ ಸಂಪನ್ನಗೊಳ್ಳಲಿದೆ.