ಉಜಿರೆ, ಜು.6: ಪ್ರಸ್ತುತ ದಿನಮಾನಗಳಲ್ಲಿ ಕುವೆಂಪು ಅವರ ವಿಚಾರದೃಷ್ಠಿ, ವಿಶ್ವಮಾನವ ಸಂದೇಶ, ಸಾಹಿತ್ಯಗಳಲ್ಲಿನ ವೈಚಾರಿಕತೆ ಮತ್ತು ಸೂಕ್ಷ್ಮತೆಗಳನ್ನು ಹೊಸ ತಲೆಮಾರಿನ ಯುವ ಸಮೂಹ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಸಾಹಿತಿ ಡಾ. ಎಚ್. ಎಸ್. ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಎಸ್ಡಿಎಂ ಕಾಲೇಜಿನ ಸಮ್ಯಕ್ ದರ್ಶನ್ ಸಭಾಂಗಣದಲ್ಲಿ ನಡೆದ ಕನ್ನಡ ವಿಭಾಗದ ಕನ್ನಡ ಸಂಘ ಹಾಗೂ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ‘ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ’ ಕುರಿತು ಆಯೋಜಿತವಾಗಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.
ಕುವೆಂಪು ಅವರ ಸಾಹಿತ್ಯಗಳಲ್ಲಿನ ಸೂಕ್ಷ್ಮತೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಮೌಢ್ಯ, ಜಾತಿ, ಮತ ಸಂಕೋಲೆಗಳ ಅಡ್ಡಿಗಳಿರಬಾರದು ಎಂದು ಅಲೋಚಿಸಿದ್ದರು. ‘ಗುಡಿ, ಚರ್ಚು, ಮಸೀದಿಗಳಿಂದ ಹೊರಬನ್ನಿ’ ಎಂಬ ವಾಕ್ಯದಿಂದ ಕುವೆಂಪು ಅವರನ್ನು ನಾಸ್ತಿಕ ಎಂಬ ದೃಷ್ಠಿಯಿಂದ ಬಿಂಬಿಸಲಾಗುತ್ತಿದೆ. ಆದರೆ ಅದರ ಸೂಕ್ಷ್ಮತೆ ಏನು ಎಂಬುದರ ಕುರಿತು ತಿಳಿದುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ ಎಂದರು.
ಹೊಸ ತಲೆಮಾರಿನ ಯುವ ಸಮೂಹಕ್ಕೆ ಕುವೆಂಪು ವೈಚಾರಿಕ ಸಾಹಿತ್ಯ ಓದಿನ ಅಗತ್ಯವಿದೆ. ಶ್ರೇಷ್ಠ ಸಂದೇಶ, ಸಾಹಿತ್ಯ ಓದಿನ ಮೂಲಕ ವೈಚಾರಿಕತೆಯನ್ನು ಜಾಗೃತಿಗೊಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ, ಸತೀಶ್ಚಂದ್ರ ಎಸ್ ಮಾತನಾಡಿದರು. ಇಂದಿನ ಶೈಕ್ಷಣಿಕ ಯುಗದಲ್ಲಿ ಪಠ್ಯ ಹಾಗೂ ಪಠ್ಯೇತರದ ಜೊತೆ ಕುವೆಂಪು ಅವರ ವ್ಯಕ್ತಿತ್ವ ಪರಿಚಯವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂ ಕಾಲೇಜು ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ. ಎ ಮಾತನಾಡಿದರು. ವಿಶಾಲ ಸಾಹಿತ್ಯ ಓದಿನಿಂದ ಹೊಸ ವಿಚಾರಗಳು ಅನುಷ್ಠಾನಗೊಳ್ಳುತ್ತವೆ. ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ರೂಪಗೊಳ್ಳುತ್ತಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ ಪ್ರಕಾಶ್ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್, ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ್ ಹಳೆಮನೆ ಉಪಸ್ಥಿತರಿದ್ದರು. ಮಹೇಶ್ ನಿರೂಪಿಸಿದರು. ಪ್ರಣಮ್ಯ ತಂಡದವರು ಪ್ರಾರ್ಥಿಸಿ, ಜಯಶ್ರೀ ವಂದಿಸಿದರು.