ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಆಗಸ್ಟ್ ೧೯ರಂದು ಅಪರಾಹ್ನ ೨ ಗಂಟೆಯಿಂದ ‘ಕಾಶ್ಮೀರ ವಿಜಯ’ ಎಂಬ ತಾಳಮದ್ದಳೆ ನಡೆಯಲಿದೆ.
ಪ್ರೊ.ಪವನ್ ಕಿರಣ್ಕೆರೆ ಪರಿಕಲ್ಪಿತ ಹಾಗೂ ಸುಧಾಕರ ಆಚಾರ್ಯ ಉಡುಪಿ ಸಂಯೋಜಿತ ಈ ತಾಳಮದ್ದಳೆ ಭಾರತದ ಸಾಹಿತ್ಯ, ಸಂಸ್ಕೃತಿ ಹಾಗೂ ತತ್ವಜ್ಞಾನಗಳಿಗೆ ಅಪಾರ ಕೊಡುಗೆಯನ್ನು ನೀಡಿ ಶಾರದಾ ದೇಶವೆಂದೇ ಪ್ರಸಿದ್ದವಾಗಿದ್ದ ಕಾಶ್ಮೀರದ ಇತಿಹಾಸವನ್ನು ಕಲಾತ್ಮಕವಾಗಿ ಪರಿಚಯಿಸುವ ಕೆಲಸವನ್ನು ಮಾಡಲಿದೆ.
ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ಡಾ.ವಿಖ್ಯಾತ್ ಶೆಟ್ಟಿ ಹಾಗೂ ಅಂಬಿಕಾ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಅಮೃತಾ ಅಡಿಗ ಪಾಣಾಜೆ ಭಾಗವಹಿಸಲಿದ್ದಾರೆ. ಪದ್ಮನಾಭ ಉಪಾಧ್ಯಾಯ ಹಾಗೂ ಗುರುಪ್ರಸಾದ್ ಬೊಳಿಂಜಡ್ಕ ಹಿಮ್ಮೇಳದಲ್ಲಿ ಸಹಕರಿಸಲಿದ್ದಾರೆ.
ಮುಮ್ಮೇಳದಲ್ಲಿ ಪ್ರೊ.ಎಂ.ಎಲ್.ಸಾಮಗ, ಮಹೇಂದ್ರ ಆಚಾರ್ಯ, ಸರ್ಪಂಗಳ ಈಶ್ವರ ಭಟ್, ಡಾ.ವಾದಿರಾಜ ಕಲ್ಲೂರಾಯ, ಪ್ರೊ.ಪವನ್ ಕಿರಣ್ ಕೆರೆ, ಶ್ರೀರಮಣಾಚಾರ್ಯ ಕಾರ್ಕಳ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.