ಕಾರವಾರ: ರಾಜಕೀಯ ನಾಯಕರುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಬರಹಗಳನ್ನು ಪೋಸ್ಟ್ ಮಾಡುವ ಬಿಜೆಪಿಯವರ ಮನಸ್ಥಿತಿ ಸರಿಯಾಗಿಲ್ಲ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಮಂಕಾಳು ವೈದ್ಯ ಟೀಕಿಸಿದ್ದಾರೆ.
ನಗರದ ಕ್ರೀಮ್ಸ್ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಿಜೆಪಿಗರ ಅಸ್ವಸ್ಥ ಮನಸ್ಥಿತಿ ಸರಿಯಾಗಬೇಕಾದರೆ ಅವರು ದಿನಕ್ಕೆ ಒಂದು ಬಾರಿಯಾದರೂ ದೇವಸ್ಥಾನಕ್ಕೆ ಹೋಗಬೇಕು. ದೇವರೇ ಅವರ ಮನಸ್ಥಿತಿಯನ್ನು ಸರಿಮಾಡಬೇಕು. ನಕಲಿ ಖಾತೆಗಳನ್ನು ಸೃಷ್ಟಿ ಮಾಡಿಕೊಂಡು ಬೇರೆಯವರ ಬಗ್ಗೆ ಏನಾದರೂ ಹೇಳುವುದು, ಮಹಿಳೆಯರನ್ನೂ ಬಿಡದೆ ಟೀಕೆಗಳನ್ನು ಮಾಡುವ ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದರು.
ನಾನು ತಪ್ಪು ಮಾಡಿದರೆ ನನ್ನ ಮೇಲೆ ಕ್ರಮ ಕೈಗೊಳ್ಳಲಿ ಆದರೆ, ಕಳ್ಳರ ಹಾಗೆ ನಕಲಿ ಖಾತೆ ಸೃಷ್ಟಿ ಮಾಡಿಕೊಂಡು ಇಲ್ಲಸಲ್ಲದ ಬರಹಗಳನ್ನು ಪೋಸ್ಟ್ ಮಾಡಿ ಅವಹೇಳನ ಮಾಡುವುದು ಸರಿಯಾದ ಕ್ರಮವಲ್ಲ. ಇಂತಹ ಬರಹಗಳು ಸ್ವಲ್ಪದಿನದ ಮಟ್ಟಿಗೆ ಕಡಿಮೆ ಆಗಿತ್ತು. ಮತ್ತೆ ಅದು ಜಾಸ್ತಿಯಾಗುತ್ತಿದೆ.
ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು. ವಾಟ್ಸ್ ಆ್ಯಪ್ ಮೂಲಕ ಬಂದಿರುವ ಅವಹೇಳನಕಾರಿ ಬರಹಗಳಿಗೆ ಸಂಬಂಧಿಸಿದಂತೆ ನಾನೇ ಐದು ಪ್ರಕರಣ ದಾಖಲಿಸಿದ್ದೇನೆ. ಪ್ರಕರಣಗಳು ಕೋರ್ಟ್ ನಲ್ಲಿ ವಿಚಾರಣೆಯಲ್ಲಿವೆ. ಪೊಲೀಸರೂ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಸಹಾಯಕರಾಗಿದ್ದಾರೆ.
ಈ ದೇಶದ ಕಾನೂನೇ ಸರಿ ಇಲ್ಲ. ಎಂದರು. ಇದಕ್ಕೆ ಕಡಿವಾಣ ಹಾಕಲು ಚರ್ಚೆ ನಡೆಸುತ್ತಿದ್ದೇವೆ ಎಂದರು. ರಾಜಕೀಯ ಮಾಡುವುದು ಬಿಜೆಪಿಯವರ ಕೆಲಸ, ರಾಜ್ಯದಲ್ಲಿ ಐದು ವರ್ಷ, ದೇಶದಲ್ಲಿ ಹತ್ತು ವರ್ಷ ಆಳ್ವಿಕೆ ನಡೆಸಿದ ಬಿಜೆಪಿಯವರು ಏನು ಮಾಡಿದ್ದಾರೆ. ಏನು ಮಾಡಬಾರದಿತ್ತೋ ಅದೆಲ್ಲವನ್ನೂ ಬಿಜೆಪಿಯವರು ಮಾಡಿದ್ದಾರೆ. ನಾವು ಏನೇ ಸರಿ ಮಾಡಿದ್ದರೂ ಸುಳ್ಳು ಹೇಳಿ ಅವರು ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ರಾಜಕಾರಣ ಮಾಡಲು ಬರುವುದೇ ಇಲ್ಲ. ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಮೇಲೆ ಬಿಜೆಪಿಯವರು ಇನ್ನೂ ಒಗ್ಗಟ್ಟಾಗಲಿಲ್ಲ ಎಂದರು.