ಪುತ್ತೂರು: ರಾಜ್ಯ ಸರಕಾರಿ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ನೌಕರರು ಹಮ್ಮಿಕೊಂಡ ಪ್ರತಿಭಟನೆಗೆ ಪುತ್ತೂರಿನಲ್ಲೂ ಸಂಪೂರ್ಣ ಬೆಂಬಲ ಸಿಕ್ಕಿದೆ.
ಬುಧವಾರ ಬೆಳಗ್ಗೆಯಿಂದಲೇ ಎಲ್ಲಾ ಸರಕಾರಿ ಇಲಾಖೆಯ ಎ ಯಿಂದ ಡಿ ದರ್ಜೆ ತನಕ್ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮೌನ ಮುಷ್ಕರದಲ್ಲಿ ತೊಡಗಿಕೊಂಡರು.
ಪ್ರತೀ ಸರಕಾರಿ ಇಲಾಖೆಯಲ್ಲಿ ಕೇವಲ ಹೊರಗುತ್ತಿಗೆ ನೌಕರರನ್ನು ಬಿಟ್ಟರೆ ಖಾಯಂ ನೌಕರರು ಕಾಣ ಸಿಗಲಿಲ್ಲ. ಎಲ್ಲರೂ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.
ಸಾರ್ವಜನಿಕರು ಹೈರಾಣು:
ಮುಷ್ಕರದ ನೇರ ಬಿಸಿ ತಟ್ಟಿರುವುದು ಸಾಮಾನ್ಯ ಜನರಿಗೆ. ಅನೇಕ ಮಂದಿ ಬುಧವಾರ ಎಂದಿನಂತೆ ಕಚೇರಿ ಕೆಲಸಗಳಿಗಾಗಿ ಬಂದು, ತಾಲೂಕು ಆಡಳಿತ ಸೌಧದ ಎದುರು ಕಾಯುತ್ತಿದ್ದ ದೃಶ್ಯ ಕಂಡುಬಂದಿತು. ಸೌಧ ಮುಂಭಾಗದ ಗಾಜಿನಲ್ಲಿ ಅಂಟಿಸಿದ್ದ ಸೂಚನೆಯನ್ನು ಗಮನಿಸಿ, ಬರಿಗೈಲಿ ವಾಪಾಸು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶಾಂತಿಯುತ ಮುಷ್ಕರ ನಮ್ಮದು:
ತಾಲೂಕಿನಲ್ಲಿ ಸುಮಾರು 900 ಕ್ಕೂ ಅಧಿಕ ಎ ಯಿಂದ ಡಿ ದರ್ಜೆ ತನಕದ ಖಾಯಂ ನೌಕರರಿದ್ದು, ಎಲ್ಲಾ ನೌಕರರು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನಮ್ಮದು ಏನಿದ್ದರೂ ಹೋರಾಟ, ಪ್ರತಿಭಟನೆ ಅಲ್ಲ. ಕೇವಲ ಕರ್ತವ್ಯಕ್ಕೆ ಗೈರು ಹಾಜರಾಗಿ ಶಾಂತಿಯುತ ಮುಷ್ಕರ ನಮ್ಮದಾಗಿದೆ. ನಮ್ಮ ಬೇಡಿಕೆ ಈಡೇರುವ ತನಕ ಹೋರಾಟ ಮುಂದುವರಿಯಲಿದೆ.
– ಶಿವಾನಂದ ಆಚಾರ್ಯ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಪುತ್ತೂರು ತಾಲೂಕು ಘಟಕ