ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್, ಭಾರತದ ಪ್ರಮುಖ ವೈವಿಧ್ಯಮಯ ಹಣಕಾಸು ಸೇವಾ ವೇದಿಕೆಗಳಲ್ಲಿ ಒಂದಾದ ನಾರ್ದನ್ ಆರ್ಕ್ ಕ್ಯಾಪಿಟಲ್ ಸಂಸ್ಥೆಯೊಂದಿಗೆ ಸಹ-ಸಾಲ ವಿತರಣೆಗಾಗಿ ಒಡಂಬಡಿಕೆಗೆ ಸಹಿ ಮಾಡಿದೆ. ಇದು ಎರಡೂ ಸಂಸ್ಥೆಗಳ ಸಣ್ಣಪ್ರಮಾಣದ (Retail) ಸಾಲಗಾರರಿಗೆ ಗ್ರಾಹಕ ಕೇಂದ್ರಿತ ಹಣಕಾಸು ಸೌಲಭ್ಯಗಳನ್ನು ನೀಡಲು ಅನುವು ಮಾಡಿಕೊಡುತ್ತದೆ.
ಸಹ-ಸಾಲ ನೀಡುವಿಕೆ, ಸಾಲದ ಮೂಲಗಳ ಆಯ್ಕೆ, ಸಾಲವಿಮೆ, ಸಾಲವಿತರಣೆ, ಸಂಗ್ರಹಣೆ ಮತ್ತು ಸಮನ್ವಯ ಪ್ರಕ್ರಿಯೆಗಳಿಗಾಗಿ ಕರ್ಣಾಟಕ ಬ್ಯಾಂಕ್ ಸುಲಭವಾಗಿ ಸಂಪರ್ಕ ಸಾಧಿಸಲು ಈ ಒಡಂಬಡಿಕೆಯು ಅನುವು ಮಾಡಿಕೊಡುತ್ತದೆ. ಸಾಲವಿತರಣೆಗಾಗಿ ಡಿಜಿಟಲ್ ಮೌಲ್ಯಮಾಪನ ಸಾಮರ್ಥ್ಯದಿಂದ ಸಾಲ ಪ್ರಕ್ರಿಯೆಯ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಮೂಲಕ, ಗ್ರಾಹಕರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಿ ಸಂತೃಪ್ತ ಭಾವವನ್ನು ನೀಡುತ್ತದೆ.
ಈ ಒಪ್ಪಂದದ ಕುರಿತು ಮಾತನಾಡಿದ ಕರ್ಣಾಟಕ ಬ್ಯಾಂಕ್ನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಹೆಚ್, “nPOS ಪ್ಲಾಟ್ಫಾರ್ಮ್ ಮೂಲಕ ನಾರ್ದರ್ನ್ ಆರ್ಕ್ನೊಂದಿಗೆ ಕರ್ಣಾಟಕ ಬ್ಯಾಂಕಿನ ಒಡಂಬಡಿಕೆಯು ಅನೇಕ ಫಿನ್ಟೆಕ್ಗಳೊಂದಿಗೆ ಪಾಲುದಾರರಾಗಲು ನಮಗೆ ವಿಪುಲ ಅವಕಾಶವನ್ನು ಒದಗಿಸಿದೆ. ಮುಂಗಡ ವಿಭಾಗದ ಬಲವರ್ಧನೆಗಾಗಿ ನಾವು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಇದರ ಭಾಗವಾಗಿ ನಾವು ಸಭಾಗಿತ್ವಕ್ಕಾಗಿ ಅನೇಕ ಕ್ಷೇತ್ರಗಳನ್ನು ನೋಡುತ್ತಿದ್ದೇವೆ. ನಾರ್ದರ್ನ್ ಆರ್ಕ್ನೊಂದಿಗಿನ ಸಂಬಂಧವು ವಿವಿಧ ಎನ್ಬಿಎಫ್ಸಿಗಳ ಮೂಲಕ ಬ್ಯಾಂಕಿಂಗ್ ವ್ಯವಹಾರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎಲ್ಲಾ ಕಡೆ ವಿಸ್ತರಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ನುಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ “ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಫಿನ್ಟೆಕ್ ಕಂಪೆನಿಗಳೊಂದಿಗೆ ಬ್ಯಾಂಕ್ ಸಹಭಾಗಿತ್ವವನ್ನು ಹೊಂದಿದೆ. ಈ ಒಪ್ಪಂದವು ನಮ್ಮ ಡಿಜಿಟಲ್ ಪರಿವರ್ತನೆಯ ಪ್ರಯಾಣಕ್ಕೆ ಅನುಗುಣವಾಗಿದೆ. ಎಲ್ಲಾ ವಿಧದ ಗ್ರಾಹಕರನ್ನು ತಲುಪುವಲ್ಲಿ ಇದು ಬ್ಯಾಂಕಿಗೆ ಸಹಕಾರಿಯಾಗಿದೆ. ಈ ಒಡಂಬಡಿಕೆಯು ನಮ್ಮ ಬ್ಯಾಂಕಿನ ಸಾಲ ವಿಭಾಗಕ್ಕೆ ಉತ್ತೇಜನ ನೀಡಿ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ” ಎಂದು ನುಡಿದರು.
ಈ ಸಂದರ್ಭದಲ್ಲಿ ನಾರ್ದನ್ ಆರ್ಕ್ ಕ್ಯಾಪಿಟಲ್ನ ಎಂಡಿ ಹಾಗೂ ಸಿಇಓ ಆಶಿಶ್ ಮೆಹ್ರೋತ್ರಾ ಅವರು “ಕರ್ಣಾಟಕ ಬ್ಯಾಂಕ್ನ ಡಿಜಿಟಲ್ ಪರಿವರ್ತನೆಯ ಪ್ರಯಾಣದಲ್ಲಿ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ. ನಾರ್ದರ್ನ್ ಆರ್ಕ್ ಕ್ಯಾಪಿಟಲ್ನ nPOS ಪ್ಲಾಟ್ಫಾರ್ಮ್, ಬ್ಯಾಂಕ್ ತನ್ನ ಸಹ-ಸಾಲ ಪಾಲುದಾರಿಕೆಯನ್ನು ಫಿನ್ಟೆಕ್ಗಳು ಮತ್ತು NBFC ಗಳೊಂದಿಗೆ ಸುಲಭವಾಗಿ ಸಾಧಿಸಲು ಅನುವು ಮಾಡಿಕೊಡುತ್ತದೆ. ಬ್ಯಾಂಕಿಂಗ್ ರಂಗದಲ್ಲಿ ಡಿಜಿಟಲ್ ಸ್ಪರ್ಶವನ್ನು ಹೆಚ್ಚಿಸಿ, ಗ್ರಾಹಕರ ಅವಶ್ಯಕತೆಗಳಿಗೆ ವೇಗವಾಗಿ ಸ್ಪಂದಿಸಲು ಕರ್ಣಾಟಕ ಬ್ಯಾಂಕಿನ ಜೊತೆಗೆ ನಾವಿರಲು ಹೆಮ್ಮೆ ಪಡುತ್ತೇವೆ” ಎಂದು ನುಡಿದರು.
ಕರ್ಣಾಟಕ ಬ್ಯಾಂಕ್ನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಹೆಚ್ ಮತ್ತು ನಾರ್ದರ್ನ್ ಆರ್ಕ್ ಕ್ಯಾಪಿಟಲ್ ಲಿಮಿಟೆಡ್ ಎಂಡಿ ಮತ್ತು ಸಿಇಒ ಆಶಿಶ್ ಮೆಹ್ರೋತ್ರಾ ಅವರು ಬೆಂಗಳೂರಿನಲ್ಲಿ ಒಪ್ಪಂದವನ್ನು ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ನ ಕ್ರೆಡಿಟ್ ಮಾರ್ಕೆಟಿಂಗ್ ವಿಭಾಗದ ಜನರಲ್ ಮ್ಯಾನೇಜರ್ ವಿನಯ ಭಟ್ ಪಿ.ಜೆ ಮತ್ತು ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.