ಬಂಟ್ವಾಳ: ವ್ಯಕ್ತಿಯೋರ್ವರು ಕೈಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿ ಮಹಿಳೆಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ದಿ. ರಮೇಶ್ ರವರ ಪುತ್ರಿ ಲಲಿತ ದೂರು ದಾರರಾಗಿದ್ದಾರೆ. ಸ್ಥಳೀಯ ನಿವಾಸಿ ಸಂತೋಷ್ ಪ್ರಕರಣದ ಆರೋಪಿಯಾಗಿದ್ದಾರೆ.
ಕಳೆದ ಕೆಲಸಮಯಗಳಿಂದ ನನ್ನ ಮೊಬೈಲ್ ಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದ ಸ್ಥಳೀಯ ನಿವಾಸಿ ಸಂತೋಷ್ ಅ.೨೧ರಂದು ಸಾಯಂಕಾಲ ನಾನು ಗಂಡನ ಮನೆಯಿಂದ ನನ್ನ ಮನೆಗೆ ತೆರಳುತ್ತಿದ್ದ ವೇಳೆ ಬೈಕಿನಲ್ಲಿ ಬಂದು ದಾರಿ ಮಧ್ಯೆ ನನ್ನನ್ನು ತಡೆದು ನಿಲ್ಲಿಸಿ ಕೈಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದು, ಈ ವೇಳೆ ಆ ದಾರಿಯಾಗಿ ಸ್ಥಳೀಯರಿಬ್ಬರು ಬಂದಿರುವ ಹಿನ್ನೆಲೆಯಲ್ಲಿ ಆತ ನನ್ನನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಲಲಿತಾ ರವರು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.