ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ದಿಶಾ ಸಮಿತಿ ಸಭೆ ನಡೆಯಿತು. ಮಂಗಳೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಕ್ಷಿನ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಭೆ ಇದಾಗಿದ್ದು, ಸಭೆಯಲ್ಲಿ ಕಲ್ಲಡ್ಕ ಫ್ಲೈಓವರ್ ಕಾಮಗಾರಿ ಬಗ್ಗೆ ಚರ್ಚೆ ನಡೆಯಿತು.
೨೦೨೩ ರ ಸಾಲಿನ ಡಿಸೆಂಬರ್ ತಿಂಗಳಲ್ಲಿ ಫ್ಲೈಓವರ್ ಕಾಮಗಾರಿ ಪೂರ್ಣವಾಗಲಿದೆ. ಈಗಾಗಲೇ ಫ್ಲೈಓವರ್ ಕಾಮಗಾರಿ ಶೇ. ೩೪ ಪೂರ್ಣಗೊಂಡಿದೆ. ಬಿಕರ್ನಕಟ್ಟೆ ಸಾಣೂರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಈ ಬಗ್ಗೆ ಗ್ರಾಮದಿಂದ ದಾವೆ ಹಾಕಿ ಆಕ್ಷೇಪಣೆ ಹಾಕಲಾಗಿದೆ. ಈ ಬಗ್ಗೆ ಸಭೆ ನಡೆಸಿ ಒಂದು ತಿಂಗಳ ಅವದಿಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಲಾಗಿದೆ. ಕೂಳೂರು ಬ್ರಿಡ್ಜ್ ಕಾಮಗಾರಿ ಆರ್ಥಿಕ ತೊಂದರೆಯಿಂದ ನಿಧಾನವಾಗಿದೆ ಎಂಬ ಮಾಹಿತಿಯನ್ನುಅಧಿಕಾರಿಗಳು ನೀಡಿದರು. ಕಾಮಗಾರಿಗೆ ಸಿಲಿಕಾ ಎಂಬ ಸಾಮಗ್ರಿ ಲಭ್ಯವಿಲ್ಲದೆ ಕಾಮಗಾರಿ ನಿಂತಿದೆ. ಈ ಬಗ್ಗೆ ಗುತ್ತಿಗೆದಾರರ ಸಭೆ ನಡೆಸಿ ಕಾಮಗಾರಿ ಆರಂಭಿಸುವಂತೆ ಸೂಚಿಸಲಾಗಿದೆ.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾರ್ವಜನಿಕರು ಹೋಗಲು ಹಿಂದೇಟು ವಿಚಾರವಾಗಿ ಮಾತನಾಡಿದ ಸಂಸದ ನಳಿನ್, ಬ್ಯಾಂಕುಗಳಲ್ಲಿ ಸಿಬ್ಬಂದಿಗಳಿಗೆ ಭಾಷೆಯ ಸಮಸ್ಯೆಯಿಂದ ಜನರು ಹೋಗದಂತಾಗಿದೆ. ಗ್ರಾಮೀಣ ಭಾಗದ ಬ್ಯಾಂಕ್ ಗಳಲ್ಲಿ ಸ್ಥಳೀಯ ಭಾಷೆ ಬಾರದವರೇ ಇರುತ್ತಾರೆ. ಈ ಬಗ್ಗೆ ಈ ಹಿಂದಿನ ಡಿಸಿಸಿ ಸಭೆಯಲ್ಲಿ ಸೂಚಿಸಲಾಗಿತ್ತು.
ಆದರೆ ಕೆಲವು ಬ್ಯಾಂಕುಗಳಲ್ಲಿ ಸ್ಥಳೀಯ ಭಾಷಾ ಸಿಬ್ಬಂದಿಗಳಿಲ್ಲದೆ ಕಷ್ಟಪಡುವಂತಾಗಿದೆ. ಹೊರ ರಾಜ್ಯಗಳ ಸಿಬ್ಬಂದಿಗಳಿಂದ ಜನರಿಗೆ ಸಂಪರ್ಕ ಕಷ್ಟ ಆಗುತ್ತಿದೆ. ಈ ಬಗ್ಗೆ ಪ್ರತೀ ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆ ಗೊತ್ತಿರುವ ಸಿಬ್ಬಂದಿ ನೇಮಕ ಮಾಡುವಂತೆ ಸಂಸದರು ಸೂಚಿಸಿದರು.
ಟೋಲ್ ಗೇಟ್ ತೆರವಿಗೆ ಸೂಚನೆ: ಟೋಲ್ ಸಂಗ್ರಹ ರದ್ದಾದರೂ ಸುರತ್ಕಲ್ ಟೋಲ್ ಗೇಟ್ ಅಸ್ತಿತ್ವದಲ್ಲಿದೆ. ಹೀಗಾಗಿ ಶೆಡ್ ಅನ್ನು ಶೀಘ್ರ ಒಡೆದು ಹಾಕುವಂತೆ ಸಂಸದರು ಸೂಚಿಸಿದರು.