News Karnataka Kannada
Wednesday, May 08 2024
ಮಂಗಳೂರು

ಕಡಬ: “ಆಫರೇಷನ್ ಎಲಿಫೆಂಟ್” ಕಾರ್ಯಾಚರಣೆ ಸ್ಥಗಿತಗೊಂಡಿಲ್ಲ – ಜಿಲ್ಲಾ ಅರಣ್ಯ ಅಧಿಕಾರಿ

"Operation Elephant" operation not stalled, says District Forest Officer
Photo Credit : News Kannada

ಕಡಬ: ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಸಮೀಪ ಫೆ.20ರಂದು ಬೆಳಗ್ಗೆ ಆನೆ ದಾಳಿಯಿಂದ ಇಬ್ಬರು ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿಯಲು ಆರಂಭಿಸಿದ “ಆಫರೇಷನ್ ಎಲಿಫೆಂಟ್” ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.  ಸುದ್ದಿ ಪ್ರಚಾರವಾಗಿದ್ದು, ಇದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದ್ದು, ಕಾರ್ಯಾಚರಣೆ ಸ್ಧಗಿತ ಮಾಡಿಲ್ಲ ಎಂಬುದಾಗಿ ಜಿಲ್ಲಾ ಅರಣ್ಯ ಅಧಿಕಾರಿ ದಿನೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರೆಂಜಿಲಾಡಿ ಸಮೀಪದ ನೈಲಾ ಎಂಬಲ್ಲಿ ಕಾಡಾನೆಗಳು ಇಬ್ಬರನ್ನು ಬಲಿ ಪಡೆದ ನಂತರ ಕಾಡಾನೆಯನ್ನು ಸೆರೆ ಹಿಡಿಯುವಂತೆ ಸ್ಥಳದಲ್ಲೇ ಗ್ರಾಮಸ್ಥರಿಂದ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಾಗರಹೊಳೆಯ ಮತ್ತಿಗೋಡು ಮತ್ತು ದುಬಾರೆ ಸಾಕಾನೆ ಶಿಬಿರಗಳಿಂದ ಕಾಡಾನೆ ಸೆರೆ ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗೂ ಮಹೇಂದ್ರ ಎಂಬ ಐದು ಸಾಕಾನೆಗಳು ಕರೆತಂದು ಕಾರ್ಯಾಚರಣೆ ಆರಂಭಿಸಲಾಗಿತ್ತು.

ಆ ಬಳಿಕ ಮೂರು ದಿನಗಳ ಕಾರ್ಯಾಚರಣೆಯಲ್ಲಿ ಡಿಎಫ್‌ಒ ದಿನೇಶ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಡಾ.ಮುಜೀಬ್ ಅವರ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ, ಎನ್ಐಟಿಕೆ ನೇತೃತ್ವದಲ್ಲಿ ಡ್ರೋನ್ ಕ್ಯಾಮರಾ ಮತ್ತು ಥರ್ಮಲ್ ಸ್ಕ್ಯಾನರ್ ಬಳಸಿ ಕಾಡಾನೆಯ ಚಲನವಲನಗಳನ್ನು ಪತ್ತೆ ಹಚ್ಚಿ ಫೆ.23ರಂದು ಇಲ್ಲಿನ ಸುಂಕದಕಟ್ಟೆ-ಕೊಂಬಾರು ರಸ್ತೆಯ ಮಂಡೆಕರ ಬಳಿಯ ಅರಣ್ಯ ಪ್ರದೇಶದಲ್ಲಿ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು.ಆ ಬಳಿಕ ಸಾಕಾನೆ ಅಭಿಮನ್ಯು ಹಾಗೂ ಇನ್ನೊಂದು ಸಾಕಾನೆಯ ಜೊತೆಗೆ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಅದನ್ನು ಸ್ಥಳಾಂತರಿಸಲಾಗಿತ್ತು. ಉಳಿದ ಮೂರು ಆನೆಗಳು ನೆಟ್ಟಣದ ಅರಣ್ಯ ಇಲಾಖೆಯ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು.ನಂತರದಲ್ಲಿ ಇದೀಗ ಭಾನುವಾರ ಫೆ.26 ರ ಭಾನುವಾರದಂದು ರಾತ್ರಿ ನೆಟ್ಟಣದಲ್ಲಿದ್ದ ಮೂರು ಸಾಕಾನೆಗಳನ್ನೂ ನಾಗರಹೊಳೆಗೆ ಕೊಂಡೊಯ್ಯಲಾಗಿದೆ. ಇದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಜಿಲ್ಲಾ ಅರಣ್ಯ ಅಧಿಕಾರಿ ದಿನೇಶ್ ಅವರು ಆಪರೇಷನ್ ಎಲಿಫಂಟ್ ಕಾರ್ಯಾಚರಣೆ ನಿಲ್ಲಿಸಿಲ್ಲ.ನಿಲ್ಲಿಸೋದು ಇಲ್ಲ.ಪ್ರಸ್ತುತ ಸಾಕಾನೆಗಳನ್ನು ಕೆಲವು ಅನಿವಾರ್ಯ ಕಾರಣಗಳಿಂದಾಗಿ ಅದರ ಮಾವುತರು ನಾಗರಹೊಳೆಗೆ ಕರೆದುಕೊಂಡು ಹೋಗಿದ್ದಾರೆ. ಅದರೂ ಇಲ್ಲಿ ಕಾಡಾನೆಗಳ ಕುರುಹು ಇರುವ ಭಾಗಗಳಲ್ಲಿ ನಮ್ಮ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ರಾತ್ರಿ ಹಗಲು ಗಸ್ತು ತಿರುಗುತ್ತಿದ್ದಾರೆ.ಪ್ರಸ್ತುತ ಕಾಡಾನೆಗಳು ಇರುವ ಬಗ್ಗೆ ಗ್ರಾಮಸ್ಥರಿಂದ ಯಾವುದೇ ಅಧಿಕೃತವಾಗಿ ದೂರುಗಳು ಬಂದಿಲ್ಲ. ಒಂದೆರಡು ಕಡೆಗಳಿಂದ ಕಾಡಾನೆಗಳನ್ನು ನೋಡಿದ್ದಾಗಿ ಸಾರ್ವಜನಿಕರ ಮಾಹಿತಿ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿಗಳು ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.ಸ್ಥಳೀಯವಾಗಿ ಕಾಡಾನೆಗಳು ಪತ್ತೆಯಾದಲ್ಲಿ ಯಾವುದೇ ಸಮಯದಲ್ಲೂ ಸಾರ್ವಜನಿಕರಿಗೆ ನಮ್ಮ ಅಧಿಕಾರಿಗಳು ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಆದರೂ ಒಂದು ಕಾಡಾನೆಯನ್ನು ಜೀವಂತ ಸೆರೆ ಹಿಡಿದರೂ ಈ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳ ಮಾತ್ರ ಕಡಬ ತಾಲೂಕನ್ನು ತಲ್ಲಣಗೊಳಿಸುತ್ತಲೇ ಇದೆ. ತಾಲೂಕಿನ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳಲ್ಲಿ ಕಾಡಾನೆಗಳ ತೊಂದರೆ ಮೇರೆ ಮೀರಿದೆ. ಪಕ್ಕದ ಗ್ರಾಮಗಳಾದ ಶಿರಾಡಿ ಹಾಗೂ ರೆಂಜಿಲಾಡಿಯಲ್ಲಿ ಆನೆಗಳಿಂದಾಗಿ ಜೀವಹಾನಿಯಾದ ಕಾರಣದಿಂದಾಗಿ ಇಲ್ಲಿನ ಕೃಷಿಕ,ರಬ್ಬರ್ ಟ್ಯಾಪರ್ ಮಾಡುವ ಜನರೂ ಭಯಭೀತರಾಗಿದ್ದಾರೆ. ಕೃಷಿ ತೋಟಗಳಿಗೆ ಕಾಡಾನೆಗಳು ನುಗ್ಗಿ ಅಪಾರ ಪ್ರಮಾಣದ ಕೃತಿಗಳನ್ನೂ ಧ್ವಂಸಗೊಳಿಸುತ್ತಲೇ ಇದೆ.

ಇಲ್ಲಿನ ಜನರು ರಾತ್ರಿ ಮಾತ್ರವಲ್ಲದೇ ಹಗಲು ಹೊತ್ತಿನಲ್ಲಿಯೂ ರಸ್ತೆಯಲ್ಲಿ ಓಡಾಡಲು ಭಯಪಡುವ ಸ್ಥಿತಿ ಎದುರಾಗಿದೆ. ಕೃಷಿ ಮಾಡಿಕೊಂಡು ಬದುಕುತ್ತಿರುವ ಜನರನ್ನು ಕಾಡಾನೆಗಳ ಉಪಟಳ ನಿರಂತರವಾಗಿ ಕಾಡುತ್ತಿದೆ. ಕೃಷಿಕರ ಅಡಿಕೆ, ರಬ್ಬರ್, ಬಾಳೆ, ತೆಂಗು ಮತ್ತಿತರ ಬಹುತೇಕ ಕೃಷಿ ಹುಟ್ಟುವಳಿಗಳು ಆನೆಗಳ ದಾಳಿಗೆ ಒಳಗಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸುತ್ತಿದೆ. ಒಂದು ಅಂದಾಜಿನ ಪ್ರಕಾರ ವರ್ಷದಲ್ಲಿ ಕನಿಷ್ಠ ಎಂದರೂ 3-4 ಸಾವಿರ ಅಡಿಕೆ ಮರಗಳು, ಸಾವಿರಕ್ಕೂ ಮಿಕ್ಕಿ ರಬ್ಬರ್ ಗಿಡಗಳು, ನೂರಾರು ತೆಂಗಿನ ಮರಗಳು, ಸಾವಿರಾರು ಬಾಳೆ ಗಿಡಗಳು, ಕೃಷಿಗೆ ನೀರುಣಿಸುವ ನೀರಾವರಿ ಪೈಪುಗಳು ಆನೆಗಳಿಂದಾಗಿ ನಾಶವಾಗುತ್ತಿವೆ. ಈ ಹಾನಿಗಳಿಗೆ ಸರಕಾರದಿಂದ ಲಭಿಸುವ ಪರಿಹಾರ ಧನ ಮಾತ್ರ ಅತ್ಯಲ್ಪ. ಇಲ್ಲಿನ ಶೇ. 75ಕ್ಕೂ ಹೆಚ್ಚು ರೈತರು ಆನೆಗಳ ಉಪಟಳದಿಂದ ನಿರಂತರ ನಷ್ಟ ಅನುಭವಿಸುತ್ತಲೇ ಇದ್ದಾರೆ.

ಇಲ್ಲಿನ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಸಂಜೆಯಾಗುತ್ತಿದ್ದಂತೆ ನಾಡಿಗೆ ಇಳಿಯುತ್ತವೆ. ಕೃಷಿ ತೋಟಗಳಿಗೆ ದಾಂಗುಡಿ ಇಟ್ಟು ಮನಸೋ ಇಚ್ಛೆ ಕೃಷಿ ನಾಶದಲ್ಲಿ ತೊಡಗುತ್ತವೆ. ರೈತರು ಗರ್ನಾಲ್, ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಿಲ್ಲ. ಕೆಲವೊಮ್ಮೆ ಹಗಲಿನಲ್ಲೂ ಆನೆಗಳು ಇಲ್ಲಿ ಕಾಣ ಸಿಗುತ್ತವೆ. ಅದರಿಂದಾಗಿ ಜನ ಭಯಭೀತರಾಗಿ ರಸ್ತೆಗಳಲ್ಲಿ ಓಡಾಡಲೂ ಭಯಪಡುತ್ತಾರೆ.

ಆನೆಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ತಡೆಯಲು ಸರಕಾರ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಕೃಷಿ ಹಾನಿಗೆ ಸಮರ್ಪಕ ಪರಿಹಾರ ಸಿಗುವಂತೆ ಮಾಡಬೇಕು. ಉಪಟಳ ನೀಡುತ್ತಿರುವ ಆನೆಗಳನ್ನು ಕೂಡಲೇ ಅಸಡ್ಡೆ ಮಾಡದೇ ಅರಣ್ಯ ಇಲಾಖೆ ಹಿಡಿದು ಆನೆ ಶಿಬಿರಗಳಿಗೆ ಸ್ಥಳಾಂತರಿಸಬೇಕು ಎನ್ನುವುದು ಸ್ಥಳೀಯ ಜನರ ಆಗ್ರಹವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು