ಮಂಗಳೂರು: ಮೃತ ಪ್ರವೀಣ್ ನೆಟ್ಟಾರ್ರವರ ಕುಟುಂಬಕ್ಕೆ ಪರಿಹಾರ ನೀಡಿದಂತೆ ಬೆಳ್ಳಾರೆಯಲ್ಲಿ ಕೊಲೆಯಾದ ಮಸೂದ್ ಕುಟುಂಬಕ್ಕೂ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಲು ಮಾಜಿ ಶಾಸಕ ಐವನ್ ಡಿ ಸೋಜ ಒತ್ತಾಯಿಸಿದ್ದಾರೆ.
ಕೋಮು ದ್ವೇಷಕ್ಕಾಗಿ ಜಿಲ್ಲೆಯಲ್ಲಿ ಕೋಮು ಸೌಹರ್ದತೆಗೆ ಧಕ್ಕೆಯುಂಟಾಗಿದ್ದು, ಕ್ರಿಯೆಗೆ-ಪ್ರತಿಕ್ರಿಯೆ ಎಂಬಂತೆ ಕೊಲೆಗಳು ಆಗುತ್ತಿರುವುದರಿಂದ ಇದನ್ನು ಕೂಡಲೇ ಸರಕಾರ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು.
ಧರ್ಮಗಳ ಮಧ್ಯೆ ಉಂಟಾಗಿರುವ ಕಂದಕವನ್ನು ಸರಿಪಡಿಸಲು ಮತ್ತು ದ್ವೇಷದ ಭಾವನೆಗಳನ್ನು ಹರಡದಂತೆ ರಾಜ್ಯ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಮಂತ್ರಿಗಳಿಗೆ ಮಾಜಿ ಶಾಸಕ ಐವನ್ ಡಿ ಸೋಜರವರು ಒತ್ತಾಯಿಸಿದ್ದಾರೆ.
ನಿನ್ನೆ ಜಿಲ್ಲೆ ಭೇಟಿ ನೀಡಿದ ಮುಖ್ಯ ಮಂತ್ರಿಗಳು ಕೇವಲ ಪ್ರವೀಣ್ ನೆಟ್ಟಾರೆಯವರ ಮನೆಗೆ ಭೇಟಿ ನೀಡಿ, ಆ ಕುಟುಂಬಕ್ಕೆ ತಲಾ 25ಲಕ್ಷ ರೂಪಾಯಿಯನ್ನು ಸರಕಾರದ ವತಿಯಿಂದ ಧನ ಸಹಾಯವನ್ನು ನೀಡಲಾಗಿದ್ದು, ಅದೇ ಮಾದರಿಯ ಕೋಮು ಸಂಘರ್ಷಕ್ಕೆ ಒಳಗಾಗಿ, ಅಮಾಯಕರಾಗಿ ಕೊಲೆ ಮಾಡಲ್ಪಟ್ಟ ಮಸೂದ್ರವರ ಕುಟುಂಬಕ್ಕೆ ಧನ ಸಹಾಯವನ್ನು ನೀಡುವಲ್ಲಿ ಸರಕಾರ ಅದೇ ಮಾನದಂಡವನ್ನು ಪಾಲಿಸದೇ ಇರುವುದು ಸರಕಾರದ ದ್ವಿಮುಖ ನೀತಿಯನ್ನು ತೋರಿಸುತ್ತದೆ.
ಕೊಲೆಯಾದ ಮೂರು ಕುಟುಂಬಗಳೂ ಬಡವರಾಗಿದ್ದು, ಅವರ ಕುಟುಂಬಗಳಿಗೆ ಕೊಲೆಯಾದವರೇ ದುಡಿಯುವ ಆಧಾರ ಸ್ತಂಭವಾಗಿರುವುದರಿಂದ ಮೂರು ಕುಟುಂಬಗಳಲ್ಲಿ ಇನ್ನುಳಿದ 2 ಕುಟುಂಬಗಳಿಗೆ ಕೂಡಲೇ ಮುಖ್ಯ ಮಂತ್ರಿಗಳು ತಲಾ 25ಲಕ್ಷ ರೂಪಾಯಿ ಧನ ಸಹಾಯವನ್ನು ಬಿಡುಗಡೆಗೊಳಿಸಿ, ಅವರ ಕುಟುಂಬಗಳಿಗೆ ಪಾವತಿಸಬೇಕೆಂದು ಮಾಜಿ ಶಾಸಕ ಐವನ್ ಡಿ ಸೋಜರವರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಇಂತಹ ಕೋಮು ಭಾವನೆಗಳನ್ನು ಹರಡಿಸುವವರ ಮತ್ತು ಪ್ರಚೋದನೆ ನೀಡುವವರ ವಿರುದ್ಧ ಸರಕಾರ ಕೂಡಲೇ ಕ್ರಮ ಕೈಗೊಂಡು, ನೈಜ ತಪ್ಪಿಸ್ಥರನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಐವನ್ ಡಿ ಸೋಜರವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.