ಬಂಟ್ವಾಳ: ತಾಲೂಕಿನಾದ್ಯಂತ ಮಳೆಯ ಆರ್ಭಟ ಸೋಮವಾರವೂ ಮುಂದುವರಿದಿದ್ದು, ನೇತ್ರಾವತಿ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ವಿವಿಧೆಡೆಗಳಲ್ಲಿ ವ್ಯಾಪಕ ಮಳೆ ಹಾನಿಸಂಭವಿಸಿದ್ದು, ಉಳಿ ಗ್ರಾಮದ ಲಿಂಗೊಟ್ಟು ಎಂಬಲ್ಲಿನ ಕಿಂಡಿಅಣೆಕಟ್ಟಿನ ಒಂದು ಭಾಗವೇ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಭಾನುವಾರ ದಿನವಿಡೀ 8 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನೇತ್ರಾವತಿ ಸೋಮವಾರ ಬೆಳಿಗ್ಗೆ 7.8.ಮೀಟರ್ ಗೆ ಇಳಿದಿತ್ತು. ಸಂಜೆಯ ಬಳಿಕ ಅಪಾಯಮಟ್ಟ 8.3ಮೀಟರ್ ನಲ್ಲಿ ಹರಿಯುತ್ತಿದೆ. ಈವರೆಗೆ ಒಟ್ಟು ಹದಿನೈದಕ್ಕೂ ಅಧಿಕಮನೆಗಳಿಗೆ ನೀರುನುಗ್ಗಿದ್ದು, ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ನಿರಂತರ ಸುರಿಯುವ ಮಳೆಯಿಂದಾಗಿ ನೀರಿನಮಟ್ಟ ಮತ್ತಷ್ಟು ಏರುವ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದ್ದು, ಮಂಗಳೂರು ಸಹಾಯಕ ಆಯುಕ್ತರು ಹರ್ಷವರ್ಧನ್ ಹಾಗೂ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅವರು ಶಂಭೂರು ಎಎಂ ಆರ್ ಡ್ಯಾಂಗೂ ಭೇಟಿ ನೀಡಿ, ಡ್ಯಾಂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ತಹಶೀಲ್ದಾರ್ ಸಹಿತ ಎಲ್ಲಾ ಕಂದಾಯ ಸಿಬ್ಬಂದಿಗಳು ಬಿ.ಸಿ.ರೋಡ್ ಮೊಕ್ಕಾಂ ಹೂಡಿ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಕಿಂಡಿ ಅಣೆಕಟ್ಟಿಗೆ ಹಾನಿ..
ಉಳಿ ಗ್ರಾಮದ ಲಿಂಗೊಟ್ಟು ಎಂಬಲ್ಲಿ ಮಳೆ ನೀರಿನ ರಭಸಕ್ಕೆ ಕಿಂಡಿ ಅಣೆಕಟ್ಟಿನ ಒಂದು ಭಾಗ ಸಂಪೂರ್ಣ ಕೊಚ್ಚಿ ಹೋಗಿದ್ದು ಇಕ್ಕೆಲಗಳ ಸಂಪರ್ಕ ಕಡಿದುಹೋಗಿರುತ್ತದೆ. ಹತ್ತಿರದ ಅಡಕೆ ತೋಟದ ಮಣ್ಣು ಕೊರೆದು ಸುಮಾರು 75 ಕ್ಕೂ ಮಿಕ್ಕಿ ಅಡಕೆ ಗಿಡಗಳು ನೀರಿನಲ್ಲಿ ಕೊಚ್ಚಿಹೋಗಿರುತ್ತದೆ. ನೀರಿನ ಸೆಳೆತ ಹೆಚ್ಚುತ್ತಿದ್ದು ಮಣ್ಣು ಕೊಚ್ಚಿ ಹೋಗುತ್ತಿರುವುದು ಮುಂದುವರಿದಿದ್ದು, ಅಪಾಯಕಾರಿಯಾಗಿರುವುದರಿಂದ ತೋಡಿನ ಸಮೀಪ ತೆರಳದಂತೆ ಹತ್ತಿರದ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಇರ್ವತ್ತೂರು ಗ್ರಾಮದ ವಿಶ್ವನಾಥರವರ ವಾಸ್ತವ್ಯದ ಮನೆಯ ಹತ್ತಿರ ಗುಡ್ಡ ಕುಸಿದಿದೆ. ಆದರೆ ಯಾವುದೇ ಹಾನಿಯಾಗಿರುವುದಿಲ್ಲ. ಕರೋಪಾಡಿ ಗ್ರಾಮದ ಒಡಿಯೂರು ಅಂಗನವಾಡಿ ಕೇಂದ್ರದ ಕಾಂಪೌಂಡ್ ಗೆ ಮರ ಬಿದ್ದು ಕಾಂಪೌಂಡ್ ಹಾನಿಯಾಗಿದೆ. ವೀರಕಂಭ ಗ್ರಾಮದ ನಡುವಳಚ್ಚಿಲ್ ಎಂಬಲ್ಲಿ ಆರತಿರವರ ಕಚ್ಚಾ ಮನೆ ತೀವ್ರ ಹಾನಿಯಾಗಿದೆ. ಸದ್ಯ ಮನೆಯವರು ಹತ್ತಿರದ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.