ನವರಾತ್ರಿ ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆಯ ಪ್ರತೀಕವಾಗಿದ್ದು, ಹಿಂದು ಪರಂಪರೆಯ ಶ್ರೇಷ್ಠ ಆಚರಣೆಯಾಗಿ ಮೂಡಿಬಂದಿದೆ. ಪುರಾಣಗಳ ಪ್ರಕಾರ ಶಕ್ತಿಯ ಅಧಿದೇವತೆಯಾದ ದುರ್ಗಾ ದೇವಿಯು ಮಹಿಷಾಸುರನನ್ನು ಕೊಂದು ರಾಕ್ಷಸ ಶಕ್ತಿಯನ್ನು ನಾಶಪಡಿಸಿದಳು ಮತ್ತು ಬ್ರಹ್ಮಾಂಡದ ಒಳಿತನ್ನು ರಕ್ಷಿಸಿದ್ದಾಳೆ. ದುರ್ಗಾ ದೇವಿಯು ಮಹಿಷಾಸುರನ ಮೇಲೆ ದಾಳಿ ಮಾಡಿ ಒಂಬತ್ತು ದಿನಗಳ ಕಾಲ ಅವನೊಂದಿಗೆ ಹೋರಾಡಿ ಹತ್ತನೇ ದಿನ ಅವನನ್ನು ಹತ್ಯೆಗೈದ ಸಮಯವು ಅಶ್ವಿನ ಮಾಸವಾಗಿತ್ತು. ಆದ್ದರಿಂದ, ಅಶ್ವಿನ ಮಾಸದ ಈ ಒಂಬತ್ತು ದಿನಗಳು ಶಕ್ತಿಯ ಆರಾಧನೆಗೆ ಮೀಸಲಾಗಿವೆ. ಪಂಚಾಂಗದ ಪ್ರಕಾರ, ಶರತ್ಕಾಲವು ಅಶ್ವಿನ ಮಾಸದಲ್ಲಿ ಪ್ರಾರಂಭವಾಗುತ್ತದೆ, ಆದ್ದರಿಂದ ಇದನ್ನು ಶಾರದೀಯ ನವರಾತ್ರಿ ಎಂದು ಕರೆಯಲಾಗುತ್ತದೆ. ಶಾರದೀಯ ನವರಾತ್ರಿಯ 10 ನೇ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ.
ನವರಾತ್ರಿ ದಿನಗಳಲ್ಲಿ ದೇವಿಯನ್ನು ಬೇರೆ ಬೇರೆ ರೂಪ, ನಾಮಗಳಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಶ್ವೇತ ವಸ್ತ್ರಧಾರಿಯಾಗಿರುವ ಶೈಲಪುತ್ರಿಯು ಮಲ್ಲಿಗೆ ಪ್ರಿಯಳು.
ಪರ್ವತ ರಾಜ ಹಿಮವಂತನ ಮಗಳಾದ ಪಾರ್ವತಿ ದೇವಿ ಅಥವಾ ಆದಿಶಕ್ತಿಯನ್ನು ಸಂಪ್ರದಾಯ ಬದ್ದವಾಗಿ ಪೂಜಿಸಲಾಗುತ್ತದೆ. ಕೆಲವೆಡೆಗಳಲ್ಲಿ ದೇವಿಯ ಮಣ್ಣಿನ ಮೂರ್ತಿ ಮಾಡಿ, ಪೂಜೆ ಮಾಡುವ ಸಂಪ್ರದಾಯವಿದೆ. ಶೈಲಪುತ್ರಿಯು ಶಾಂತ ಸ್ವಭಾವದಳಾಗಿದ್ದಾಳೆ. ಶೈಲ ಎಂದರೆ ಬೆಟ್ಟ. ಒಂದು ಕೈಯಲ್ಲಿ ಕಮಲ, ಮತ್ತೊಂದು ಕೈಯಲ್ಲಿ ತ್ರಿಶೂಲ ಹಿಡಿದು ನಿಂತಿರುವಂತೆ ಈ ದೇವತೆಯನ್ನು ಚಿತ್ರಿಸಲಾಗಿದೆ. ಹಾಗಾಗಿ ದೇಹ ಮನಸ್ಸು ಮಲಿನವಾಗದಂತೆ, ಪಾರದರ್ಶಕವಾಗಿದ್ದಾಗ ಮಾತ್ರ ದೇವರನ್ನು ಒಲಿಸಿಕೊಳ್ಳಬಹುದು ಎನ್ನುವುದು ಇದು ತಿಳಿಸಿ ಕೊಡುತ್ತದೆ.
ಹಿನ್ನಲೆ: ಪರ್ವತರಾಜ ಹಿಮವಂತನ ಪುತ್ರಿಯೇ ಶೈಲ ಪುತ್ರಿ. ತನ್ನ ಹಿಂದಿನ ಜನ್ಮದಲ್ಲಿ ತಂದೆಯಾದ ದಕ್ಷ ಮಹಾರಾಜ, ತನ್ನ ಪತಿ ಶಿವನನ್ನು ಅವಮಾನಿಸಿದ್ದನ್ನು ಸಹಿಸಲಾಗದೆಯೇ ದಾಕ್ಷಾಯಿಣಿಯು ”ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡಿರುತ್ತಾಳೆ. ಹೀಗೆ ತನ್ನ ಶರೀರವನ್ನು ಭಸ್ಮವಾಗಿಸಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಅಂದರೆ ಶೈಲ ಪುತ್ರಿಯಾಗಿ ಹುಟ್ಟಿ ಮತ್ತೆ ಶಿವನ ಮಡದಿ ‘ಸತಿ’ಯಾಗುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯವಿದೆ.
ಪೂಜಾ ಫಲವೇನು?: ಶೈಲಪುತ್ರಿ ದೇವಿಯ ಆರಾಧನೆಯಿಂದ “ಧರ್ಮಾರ್ಥ ಕಾಮ ಮೋಕ್ಷ ಚತುರ್ ಭುವಿಧಂ ಪುರುಷಾರ್ಥ ಫಲವ” ಎನ್ನುವಂತೆ ಎಲ್ಲ ಫಲವು ಸಿಗುತ್ತದೆ. ಮನಸ್ಸಿನ ಆಸೆಗಳೆಲ್ಲ ಈಡೇರುತ್ತವೆ. ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ, ಇಂದ್ರಿಯ ನಿಗ್ರಹ ಶಕ್ತಿಯು ಒದಗುತ್ತದೆ. ಶೈಲಪುತ್ರಿಯ ರೂಪವು ನಾವು ಪಾಲಿಸಬೇಕಾದ ಶಾಂತಿಯುತವಾದ ನಡವಳಿಕೆಗೆ ಪ್ರೇರಣೆಯಾಗಿದೆ.