ಬೆಳಾಲು: ಜನಪದ ಕಲಾವಿದ ತುಳು ಸಿರಿ ಕಾವ್ಯದ ಕಣಜ ಎಂದೇ ಖ್ಯಾತರಾಗಿದ್ದ ಬೆಳಾಲು ಗ್ರಾಮದ ಮಾಚಾರು ಗೋಪಾಲ ನಾಯ್ಕ(85) ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಏ. 24ರಂದು ನಿಧನ ಹೊಂದಿದರು. ಅವರಿಗೆ ಪತ್ನಿ, ಪುತ್ರ ಹಾಗೂ ನಾಲ್ವರು ಪುತ್ರಿಯರಿದ್ದಾರೆ.
ಜಾನಪದ ಕ್ಷೇತ್ರದಲ್ಲಿನ ಇವರ ಸೇವೆಗೆ 2005ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯು ದೊರಕಿತ್ತು. ಸಿರಿ ಸಂಧಿಯಲ್ಲಿರುವ 15,683 ಸಾಲುಗಳ ದೀರ್ಘ ಪಠ್ಯವನ್ನು ನಿರರ್ಗಳವಾಗಿ ಹಾಡುತ್ತಿದ್ದರು. ಸಿರಿ ಜಾತ್ರೆಗಳಲ್ಲಿ ನಡೆಯುವ ದಲ್ಯ ಆಚರಣೆಗಳಲ್ಲಿ ಇವರ ಸಿರಿ ಕಾವ್ಯ ಇಂದಿಗೂ ಪ್ರಸ್ತುತವಾಗಿದೆ.
ಜನಪದ ಪುರಾಣಗಳು ಮತ್ತು ಪರಂಪರೆಯ ಕುರಿತ ಅಪಾರ ತಿಳುವಳಿಕೆ ಹೊಂದಿದ್ದ ಇವರ ಸಿರಿ ಕಾವ್ಯದ ಕಥೆಯ ನಡಿಗೆ, ಅದರ ಕಥೆಗಳನ್ನು ಘಟಕಗಳನ್ನಾಗಿ ವಿಂಗಡಿಸಿ ಮರು ಕಟ್ಟುವ ಕಲೆ, ವರ್ಣನೆಯನ್ನು ಪರಂಪರೆಯಿಂದ ಆಯ್ದು ಅಳವಡಿಸುತ್ತಿದ್ದರು. 1985 ರಲ್ಲಿ ಫಿನ್ಲೆಂಡ್ ನ ಲೌರಿ ಹಾಂಕೋ ಅವರು ಜಾನಪದ ಅಧ್ಯಯನಕ್ಕೆ ಕಾರ್ಯಕ್ರಮಕ್ಕೆ ಉಡುಪಿಗೆ ಬಂದಿದ್ದಾಗ ಗೋಪಾಲ ನಾಯ್ಕರ ಪ್ರತಿಭೆಯನ್ನು ಗುರುತಿಸಿ, ಬಿ.ಎ. ವಿವೇಕ ರೈ, ಚಿನ್ನಪ್ಪ ಗೌಡ ನೇತೃತ್ವದಲ್ಲಿ ಇವರ ಮೂಲಕ ಸಿರಿಸಂಧಿಯ ಪಠ್ಯವನ್ನು ಸಂಗ್ರಹಿಸಿದ್ದರು.
ಸಂತಾಪ
ಜಾನಪದ ಕವಿಯಾಗಿ ಪ್ರಸಿದ್ಧಿ ಪಡೆದು, ಹಲವು ಸಂಧಿ ಪಾಡ್ದನಗಳ ಕಣಜ ಎಂದು ಪ್ರಖ್ಯಾತರಾಗಿದ್ದ ಮಾಚಾರು ಗೋಪಾಲ ನಾಯ್ಕರ ನಿಧನ ಜಾನಪದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.